ಹುಬ್ಬಳ್ಳಿ: ಇಲ್ಲಿನ ತಬೀಬ್ ಲ್ಯಾಂಡ್ನಲ್ಲಿರುವ ಪವರ್ ಹೌಸ್ ಕಂಪೌಂಡ್ ನಲ್ಲಿ ಹೆಸ್ಕಾಂನ ಕಾರ್ಯ ಮತ್ತು ಪಾಲನೆ ನಗರ ಮತ್ತು ಗ್ರಾಮೀಣ ವಿಭಾಗ ಹಾಗೂ ಹುಬ್ಬಳ್ಳಿ ಗ್ರಾಮೀಣ ಉಪವಿಭಾಗದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಶ್ರೀಗಣೇಶನ ಮೂರ್ತಿ ಜನಮನ ಸೆಳೆಯುತ್ತಿದೆ.
ಕಳೆದ 35 ವರ್ಷಗಳಿಂದಲೂ ಇಲ್ಲಿ ಶ್ರೀಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತಾ ಬಂದಿದ್ದು, ಈ ವರ್ಷದ ಗಣೇಶೋತ್ಸವ ವಿಶೇಷತೆಯಿಂದ ಕೂಡಿದೆ. ಹೆಸ್ಕಾಂ ಪವರ್ ಮ್ಯಾನ್ ವಿನಾಯಕ ಕದಂ ಸಿದ್ಧಪಡಿಸಿರುವ ಈ ಗಣಪ ವಿದ್ಯುತ್ ಅವಘಡ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಜತೆಗೆ ಸಂಪೂರ್ಣ ಮಣ್ಣಿನಿಂದಲೇ ತಯಾರಿಸಲಾಗಿದ್ದು, ಪರಿಸರ ಸ್ನೇಹಿಯೂ ಆಗಿದೆ.
ಗಣೇಶ ಮೂರ್ತಿ ತಯಾರಿಸಿದ ವಿನಾಯಕ ಕದಂ ಅವರ ಪ್ರತಿಭೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶುಕ್ರವಾರ ವಿನಾಯಕ ಅವರನ್ನು ಹೆಸ್ಕಾಂನ ಹಣಕಾಸು ನಿರ್ದೇಶಕ ಪ್ರಕಾಶ್ ಪಾಟೀಲ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಜಯಪ್ರದಾ, ಗ್ರಾಮೀಣ ವಿಭಾಗದ ಪ್ರಭಾರಿ ಕಾರ್ಯನಿರ್ವಾಹಕ ಇಂಜಿನಿಯರ್ ಕಿರಣ್ ಕುಮಾರ್ ಬಿ. ಸೇರಿದಂತೆ ಅನೇಕರು ಹಾಜರಿದ್ದರು. ಶುಕ್ರವಾರ ಅನ್ನಸಂತರ್ಪಣೆ ಜರುಗಿದ್ದು, ಸಾವಿರಾರು ಜನರು ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸಿದರು. ಸೆ.17ರಂದು ಶ್ರೀಗಣೇಶನ ಮೂರ್ತಿ ವಿಸರ್ಜನೆ ಮಾಡಲಾಗುವುದು ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಕಿರಣ್ ಕುಮಾರ್ ಬಿ. ತಿಳಿಸಿದರು.
Kshetra Samachara
13/09/2024 08:05 pm