ಕೋಲ್ಕತ್ತಾ : ಕೋಲ್ಕತ್ತಾದ ಆರ್ಜಿ ಕಾರ್ ಆಸ್ಪತ್ರೆಯಲ್ಲಿ ಯುವ ವೈದ್ಯೆ ಮೇಲಿನ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ವೇಳೆ ನೇರ ಪ್ರಸಾರ ಮಾಡಬಾರದು ಎಂದು ವಕೀಲ ಕಪಿಲ್ ಸಿಬಲ್ ಮನವಿ ಮಾಡಿದ್ದಾರೆ..
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠದಲ್ಲಿ ನಿನ್ನೆ ವಿಚಾರಣೆ ನಡೆದಿದ್ದು, ಈ ವೇಳೆ ನೇರ ಪ್ರಸಾರವನ್ನು ರದ್ದುಗೊಳಿಸುವಂತೆ ಸಿಬಲ್ ಮನವಿ ಮಾಡಿದರು.
ಈ ಬಗ್ಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸಿದ್ದಕ್ಕಾಗಿ ತಮ್ಮ ಚೇಂಬರ್ನಲ್ಲಿರುವ ವಕೀಲರಿಗೆ ಅತ್ಯಾಚಾರ, ಕೊಲೆ, ಆ್ಯಸಿಡ್ ದಾಳಿ ನಡೆಸಲಾಗುವುದು ಎಂಬ ಎಚ್ಚರಿಕೆಯ ಕರೆಗಳು ಬರುತ್ತಿವೆ ಎಂದು ಹೇಳಿದರು.
ಅದು ಅಲ್ಲದೇ ನೇರ ಪ್ರಸಾರದಿಂದ ನನ್ನ 5 ದಶಕಗಳಿಂದ ನಿರ್ಮಿಸಲಾದ ಖ್ಯಾತಿ ನಾಶವಾಗುತ್ತದೆ. ಸೂಕ್ಷ್ಮ ವಿಷಯದ ವಿಚಾರಣೆಯನ್ನು ಲೈವ್-ಸ್ಟ್ರೀಮ್ ಮಾಡದಂತೆ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿದ್ದಾರೆ.
ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿದ್ದು, ಇದು ಮುಕ್ತ ನ್ಯಾಯಾಲಯ, ನಾವು ಲೈವ್-ಸ್ಟ್ರೀಮಿಂಗ್ ಅನ್ನು ನಿಲ್ಲಿಸುವುದಿಲ್ಲ, ಇದು ಸಾರ್ವಜನಿಕ ಹಿತಾಸಕ್ತಿಯಾಗಿದೆ ಎಂದು ಆದೇಶ ಹೊರಡಿಸಿದೆ.
PublicNext
18/09/2024 07:12 am