ಬೆಳಗಾವಿ: ಬೆಳಗಾವಿ ತಾಲೂಕಿನ ಬಸುರತೆ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಚೆಕ್ ಡ್ಯಾಂ ಕಾಮಗಾರಿ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಬಸುರತೆ ಗ್ರಾಮಸ್ಥರು ನಗರದ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಗ್ರಾಮದಲ್ಲಿ ಒಂದು ಅತಿ ಚಿಕ್ಕದಾದ ಚೆಕ್ ಡ್ಯಾಂ ಇದೆ. ಆದರೆ ಅದು ಇಲ್ಲಿಯ ರೈತರಿಗಾಗಿ ಹಾಗೂ ಗ್ರಾಮಸ್ಥರಿಗೆ ಉಪಯೋಗವಾಗುತ್ತಿಲ್ಲ. ಹೀಗಿರುವಾಗ ಇನ್ನೊಂದು ಚೆಕ್ ಡ್ಯಾಂ ನಿರ್ಮಾಣದಿಂದ ಗ್ರಾಮಸ್ಥರಿಗೆ ಯಾವುದೇ ಅನುಕೂಲ ವಾಗುವುದಿಲ್ಲ. ಆದ್ದರಿಂದ ಈ ಡ್ಯಾಮ್ ಕಾಮಗಾರಿ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಈ ಡ್ಯಾಮ್ ನಿರ್ಮಿಸುವುದುಕ್ಕಾಗಿ ನಮ್ಮ ಕೃಷಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದಾರೆ. ಈ ಜಮೀನನ್ನೇ ಅವಲಂಬಿಸಿ ಕುಟುಂಬ ನಿರ್ವಹಿಸುತ್ತಿದ್ದೇವೆ. ಇದನ್ನು ಸ್ವಾಧೀನ ಪಡಿಸಿಕೊಂಡರೆ ನಮ್ಮ ಎಲ್ಲ ಗ್ರಾಮಸ್ಥರ ಕುಟುಂಬಗಳು ಬೀದಿಗೆ ಬರುತ್ತವೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ನಮ್ಮ ಕೃಷಿ ಜಮೀನನ್ನು ಈ ಡ್ಯಾಮ್ ಕಾಮಗಾರಿಗೆ ಬಿಟ್ಟುಕೊಡುವುದಿಲ್ಲ.ಕೂಡಲೇ ಬಸುರತೆ ಗ್ರಾಮದಲ್ಲಿ ನಿರ್ಮಸುತ್ತಿರುವ ಚೆಕ್ ಡ್ಯಾಂ ಕಾಮಗಾರಿ ಪ್ರಕ್ರಿಯೆಯನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ಉಗ್ರ ಹೋರಾಟವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
PublicNext
16/10/2024 07:07 pm