ಬೆಳಗಾವಿ: ನಗರದ ರೀಯಲ್ ಎಸ್ಟೇಟ್ ಉದ್ಯಮಿ ಸಂತೋಷ ಪದ್ಮನ್ನವರ ಆಕಸ್ಮಿಕ ಸಾವಿನ ಪ್ರಕರಣ ಈಗ ವಿಚಿತ್ರ ತಿರುವು ಪಡೆದಿದೆ. ತಮ್ಮತಂದೆ ಸಾವು ಆಕಸ್ಮಿಕವಲ್ಲ ಅಸಹಜ ಸಾವಾಗಿದ್ದು ಈ ಬಗ್ಗೆ ತನಿಖೆ ನಡೆಸಬೇಕೆಂದು ಪೊಲೀಸರಿಗೆ ದೂರು ನೀಡಿದ್ದು ಈ ಎಲ್ಲ ಬೆಳವಣಿಗೆಗೆ ಕಾರಣವಾಗಿದೆ.
ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿ ಆಂಜನೇಯ ನಗರದ ಸಂತೋಷ ಪದ್ಮನ್ನವರ ಹೃದಯಾಘಾತದಿಂದ ಮೃತಪಟ್ಟಿದ್ದರು. ತನ್ನ ಪತಿ ಸಂತೋಷ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಹೇಳಿ ಪತ್ನಿ ಉಮಾ ಪತಿಯ ಅಂತ್ಯಕ್ರಿಯೆ ನಡೆಸಿದ್ದರು. ಉಮಾ ಅವರ ಮಾತನ್ನು ನಂಬಿ ಸಂಬಂಧಿಕರೂ ಸಹ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಸಂತೋಷ್ ಅವರ ಮನೆಯ ಮೂಲೆ ಮೂಲೆಯಲ್ಲಿ ಸಿಸಿ ಕ್ಯಾಮರಾ ಅಳವಳಿಸಲಾಗಿದೆ. ತಂದೆಯ ಸಾವಿನ ಸುದ್ದಿ ತಿಳಿದು ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದ ಪುತ್ರಿ ಸಂಜಾನಾ, ತಂದೆಯ ಸಾವಿನ ಸಂದರ್ಭ ಹಾಗೂ ಅಂತ್ಯಕ್ರಿಯೆ ದೃಶ್ಯಾವಳಿಗಳ ಕ್ಯಾಮರಾ ಫುಟೇಜ್ ನೋಡಲು ಬಯಸಿದ್ದಾಳೆ. ಆದರೆ ಕ್ಯಾಮರಾದಲ್ಲಿಯ ಸುಮಾರು ಒಂದು ತಾಸಿನ ಫುಟೇಜ್ ಡಿಲೀಟ್ ಆಗಿವೆ ಎಂದು ಹೇಳಲ್ತಾ ಇದೆ.
ಇದರಿಂದ ಸಂಶಯಗೊಂಡ ಸಂಜನಾ, ಯಾರೋ ಉದ್ದೇಶ ಪೂರ್ವಕವಾಗಿ ತಂದೆಯ ಸಾವಿನ ದೃಶ್ಯಾವಳಿಗಳನ್ನು ಡಿಲೀಟ್ ಮಾಡಿದ್ದಾರೆ. ಅವರ ಸಾವು ಸಹಜ ಸಾವಲ್ಲ ಇದರಲ್ಲಿ ಯಾರದೋ ಕೈವಾಡವಿದೆ. ಅದನ್ನು ತನಿಖೆ ಮಾಡಬೇಕೆಂದು ಕೋರಿ ಸಂಜನಾ ಪೊಲೀಸರಿಗೆ ದೂರು ನೀಡಿದ್ದಾಳೆ.
ಫುಟೇಜ್ ಡಿಲೀಟ್ ಮಾಡಿದ್ದು ನಿಜವೇ ಆಗಿದ್ದರೆ, ಸಂತೋಷ ಅವರ ಸಾವಿನಲ್ಲಿ ಮನೆಯವರದೇ ಕೈವಾಡವಿರಬಹುದೆಂದು ಶಂಕಿಸಲಾಗುತ್ತಿದೆ.
ಮಾಳಮಾರುತಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸಂತೋಷನ ಎದುರ ಮನೆಯ ಸಿಸಿ ಕ್ಯಾಮರಾ ಪುಟೇಜ್ ಚೆಕ್ ಮಾಡಿದಾಗ ರಾತ್ರಿ ಸಮಯದಲ್ಲಿ ಸಂತೋಷ ಮನೆಯಿಂದ ಇಬ್ಬರು ಅಪರಿಚಿತರು ಹೋಗುವ ದೃಶ್ಯ ಸೆರೆಯಾಗಿದೆ.
ಅಕ್ಟೋಬರ್ 9ರಂದು ಸಂತೋಷ್ ಸಂಶಯಾಸ್ಪದ ರೀತಿಯಲ್ಲಿ ಸಾವಿಡಾಗಿದ್ದು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂದು ಸಾಬೀತಾದರೆ ಆರೋಪಿಗಳನ್ನು ವಶಕ್ಕೆ ಪಡೆಯಲಿದ್ದಾರೆ. ಅಂದು ರಾತ್ರಿ ಮನೆಯ ಬಳಿ ಕಂಡಿದ್ದ ವ್ಯಕ್ತಿ ಮಂಗಳೂರು ಮೂಲದವ ಎಂಬ ಮಾಹಿತಿ ಸಿಕ್ಕಿದ್ದು, ಅವರ ಬಂಧನಕ್ಕೂ ವಿಶೇಷ ತಂಡ ರಚಿಸಲಾಗಿದೆ ಎಂದು ಹೇಳಲಾಗ್ತಾ ಇದೆ.
ಸಂತೋಷ್ ಅವರಿಗೆ ಹೃದಯಾಘಾತವಾಗಿದ್ದರೆ, ಪತ್ನಿ ಉಮಾ ತಕ್ಷಣ ಆಸ್ಪತ್ರೆಗೆ ಏಕೆ ಸೇರಿಸಲಿಲ್ಲ? ಸಹಜ ಸಾವಾಗಿದ್ದರೂ, ವೈದ್ಯರು ಘೋಷಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕಲ್ಲವೆ? ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದು ಏಕೆ ಎಂಬುದಕ್ಕೆ ಪತ್ನಿ ಉಮಾ ಅವರು ಉತ್ತರಿಸಬೇಕಾಗಿದೆ.
ಇಷ್ಟು ಮಾತ್ರವಲ್ಲ ಅಂದಿನ ರಾತ್ರಿಯ ಪ್ರಮುಖ ದೃಶ್ಯಾವಳಿಗಳು ಡಿಲೀಟ್ ಮಾಡಿದ್ದು ಯಾರು ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ.
PublicNext
16/10/2024 02:42 pm