ಬೆಳಗಾವಿ: ಬೆಳಗಾವಿಯಲ್ಲಿ ಖಾಸಗಿ ಫೈನಾನ್ಸ್ ಮೂಲಕ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬರ ಸಾವು ಅನುಮಾನಕ್ಕೆ ಕಾರಣವಾಗಿದೆ. ಅಕ್ಟೋಬರ್ 9ರಂದು ಮೃತರ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ, ಮಗಳು ಸಾವಿನಲ್ಲಿ ಅನುಮಾನ ಇದೆ ಎನ್ನುವ ಬಗ್ಗೆ ದೂರು ನೀಡಿದ್ದು, ಹಾಗಾಗಿ ಅಂತ್ಯಕ್ರಿಯೆ ನಡೆಸಿದ್ದ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಖಾಸಗಿ ಫೈನಾನ್ಸ್ ಮೂಲಕ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಸಂತೋಷ್ ಪದ್ಮಣ್ಣವರ್(47) ಅಕ್ಟೋಬರ್ 9ರಂದು ಮನೆಯಲ್ಲಿ ಮೃತಪಟ್ಟಿದ್ದರು. ಇದೊಂದು ಸಹಜ ಸಾವು ಎಂದು ಎಲ್ಲರೂ ಅಂದುಕೊಂಡಿದ್ದರು. ಹಾಗಾಗಿ ಅಕ್ಟೋಬರ್ 10ರಂದು ಅಂತ್ಯಕ್ರಿಯೆ ನಡೆಸಿದ್ದರು.
ಆದರೆ, ಸಂತೋಷ್ ಮಗಳು ಸಂಜನಾ ಮನೆಯಲ್ಲಿ ಕುಳಿತ ಸಂದರ್ಭದಲ್ಲಿ ಸಿಸಿ ಟಿವಿ ಚೆಕ್ ಮಾಡಿದ್ದಾಳೆ. ಈ ವೇಳೆಯಲ್ಲಿ ತಾಯಿ ಉಮಾ, ಮಗಳನ್ನು ಗದರಿಸಿ ಸ್ನಾನಕ್ಕೆ ಹೋಗುವಂತೆ ಹೇಳಿದ್ದಾರೆ. ಸ್ನಾನ ಮಾಡಿ ವಾಪಸ್ ಬರುವಷ್ಟರಲ್ಲಿಯೇ ತಾಯಿ ಉಮಾ ಸಿಸಿ ಟಿವಿ ದೃಶ್ಯವನ್ನು ಡಿಲೀಟ್ ಮಾಡಿಸಿದ್ದಳು! ಇದರಿಂದ ಸಂಜನಾಗೆ ತಂದೆಯ ಸಾವಿನ ಬಗ್ಗೆ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಸಂಜನಾ ನೇರವಾಗಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ತಂದೆಯ ಸಾವಿನ ಬಗ್ಗೆ ದೂರು ನೀಡಿದ್ದಳು. ಸಂಜನಾ ಅನುಮಾನದ ಮೇರೆಗೆ ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಸಂಜನಾ ದೂರು ಹಿನ್ನೆಲೆಯಲ್ಲಿ ಸಂತೋಷ್ ಪದ್ಮಣ್ಣವರ್ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಪೊಲೀಸರು ಒಳ ಪಡಿಸಿದ್ರು. ಈ ವೇಳೆಯಲ್ಲಿ ಮೃತ ಸಂತೋಷ್ ಮಗಳು ಸಂಜನಾ ಹಾಗೂ ಬೆಳಗಾವಿ ಎಸಿ ಶ್ರವಣ ನಾಯಕ್ ಹಾಗೂ ಮಾಳ ಮಾರುತಿ ಪೊಲೀಸ್ ಠಾಣೆಯ ಸಿಪಿಐ ಸ್ಥಳದಲ್ಲಿ ಇದ್ದರು. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಹಜ ಸಾವೋ, ಕೊಲೆಯೋ ಎಂಬುದು ಖಚಿತವಾಗಿ ಗೊತ್ತಾಗಲಿದೆ.
ಇನ್ನೂ ಪದ್ಮಣ್ಣವರ್ ಮನೆಗೆ ಅಪರಿಚಿತರು ಬಂದು ಹೋಗಿರೋದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ಸದ್ಯ ಪ್ರಕರಣದ ಬೆನ್ನು ಬಿದ್ದಿರುವ ಮಾಳಮಾರುತಿ ಠಾಣೆ ಪೊಲೀಸರು ಎರಡು ಟೀಮ್ ಮಾಡಿಕೊಂಡು ಸಿಸಿ ಟಿವಿಯಲ್ಲಿ ಸೆರೆಯಾದ ಅಪರಿಚಿತರು ಯಾರು ಅನ್ನೋದನ್ನು ತನಿಖೆ ನಡೆಸುತ್ತಿದ್ದಾರೆ. ಹೀಗೆ ಬಂದು ಹೋದ ಇಬ್ಬರ ಪತ್ತೆಗೆ ಒಂದು ಟೀಮ್ ಬೆಂಗಳೂರು ಮತ್ತೊಂದು ಟೀಮ್ ಮಂಗಳೂರಿಗೆ ಹೋಗಿದೆ.
ಇತ್ತ ಆಂಜನೇಯ ನಗರದಲ್ಲಿರುವ ಪತ್ನಿ ಉಮಾಳ ಮನೆಯಲ್ಲಿ ಒಂದು ಪೊಲೀಸ್ ಟೀಮ್ ಇದ್ದು, ಮನೆ ಶೋಧ ನಡೆಸಿದೆ. ಇತ್ತ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮುಂದಿನ ವಿಚಾರಣೆಗೆ ಉಮಾಳನ್ನು ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇತ್ತ ಪೊಲೀಸರ ಪರಿಶೀಲನೆ ವೇಳೆ ಮನೆಯಲ್ಲಿ ಕೆಲ ಪೆನ್ ಡ್ರೈವ್ ಗಳು ಸಿಕ್ಕಿದ್ದು, ಅದರಲ್ಲಿ ಏನಿದೆ ಅನ್ನೋದರ ಕುರಿತು ಕೂಡ ಪರಿಶೀಲನೆ ಮಾಡ್ತಿದ್ದಾರೆ. ಇನ್ನು, ಸಂತೋಷರ ಸಾವಿಗೆ ಆತನ ಪತ್ನಿ ಉಮಾ ಕಾರಣ ಎಂದು ಆರೋಪಿಸಲಾಗಿದೆ.
ಸಂತೋಷ್ ಪದ್ಮಣ್ಣವರ್ ಸಾವಿನ ಬಗ್ಗೆ ಪತ್ನಿ ಉಮಾಳನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ಎಫ್ ಎಸ್ ಎಲ್ ಹಾಗೂ ಮರಣೋತ್ತರ ಪರೀಕ್ಷೆ ಬರೋವರೆಗೆ ಯಾವುದೇ ರೀತಿಯಲ್ಲಿ ಖಚಿತವಾಗಿ ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಮರಣೋತ್ತರ ಪರೀಕ್ಷೆ ಬಂದ ಬಳಿಕ ಸಹಜ ಸಾವಾ? ಅಥವಾ ಪತ್ನಿಯೆ ಕೊಲೆ ಮಾಡಿಸಿದ್ಲಾ? ಎಂಬುದು ಗೊತ್ತಾಗಲಿದೆ.
- ಪ್ರಲ್ಹಾದ ಪೂಜಾರಿ, ಬೆಳಗಾವಿ
PublicNext
16/10/2024 05:46 pm