ಧಾರವಾಡ: ಇದೇ ಸೆ.21 ರಿಂದ ನಾಲ್ಕು ದಿನಗಳ ಕಾಲ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ನಡೆಯಲಿದ್ದು, ಈ ಕೃಷಿ ಮೇಳದ ಆಮಂತ್ರಣ ಪತ್ರಿಕೆಯಲ್ಲಿ ಕುಲಸಚಿವೆ ಜಯಲಕ್ಷ್ಮೀ ಅವರ ಹೆಸರನ್ನು ಕೈ ಬಿಡಲಾಗಿದೆ.
ಮೊನ್ನೆಯಷ್ಟೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕುಲಸಚಿವೆ ಜಯಲಕ್ಷ್ಮೀ ಅವರು ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದಿದ್ದರು. ಕೃಷಿ ಮೇಳದಲ್ಲಿ ಶಿಷ್ಟಾಚಾರವನ್ನು ಗಾಳಿಗೆ ತೂರಲಾಗಿದ್ದು, ನಾನು ಶಿಷ್ಟಾಚಾರ ಇಲಾಖೆಗೆ ಪತ್ರ ಬರೆಯುತ್ತೇನೆ. ಆದರೆ, ದ್ವೇಷದಿಂದ ಅಲ್ಲ. ಶಿಷ್ಟಾಚಾರ ಪಾಲನೆಯಾಗಬೇಕು ಹಾಗೂ ಮುಂದೆ ಬರುವ ಕುಲಸಚಿವರಿಗೂ ಗೌರವ ಸಿಗುವಂತಾಗಬೇಕು ಎಂದು ಪತ್ರ ಬರೆಯುತ್ತೇನೆ ಎಂದಿದ್ದಾರೆ.
ಕುಲಸಚಿವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಕೈಬಿಟ್ಟಿದ್ದಕ್ಕೆ ನಿನ್ನೆ ಕೃಷಿ ವಿವಿಯು ಕೃಷಿ ಮೇಳಕ್ಕೆ ಕುಲಸಚಿವರು ಸಂಬಂಧವಿಲ್ಲ ಎಂಬ ಸ್ಪಷ್ಟೀಕರಣದ ಪ್ರಕಟಣೆ ನೀಡಿತ್ತು. ಆದರೆ, ರಾಜ್ಯ ಸರ್ಕಾರದ ಶಿಷ್ಟಾಚಾರ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕುಲಸಚಿವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಸೇರಿಸಬೇಕು ಎಂಬ ಉಲ್ಲೇಖವಿದೆ. ಕ್ರಮ ಸಂಖ್ಯೆ 29ರ ಪ್ರಕಾರವೂ ಕುಲಸಚಿವರ ಹೆಸರನ್ನು ಸೇರಿಸಬೇಕು ಎಂಬ ನಿಯಮವಿದೆ. ಮುಂದೆ ಯಾವತ್ತೂ ಇಂತಹ ಎಡವಟ್ಟು ಆಗಬಾರದು ಎಂದು ಕುಲಸಚಿವೆ ಜಯಲಕ್ಷ್ಮೀ ಹೇಳಿದ್ದಾರೆ.
ಒಟ್ಟಾರೆ ಧಾರವಾಡದ ಕೃಷಿ ಮೇಳ ಯಶಸ್ವಿಯಾಗಬೇಕು. ನಾನು ಕೂಡ ರೈತನ ಮಗಳಾಗಿದ್ದು, ಸಾಮಾನ್ಯರಂತೆ ಕೃಷಿ ಮೇಳವನ್ನು ವೀಕ್ಷಣೆ ಮಾಡುತ್ತೇನೆ. ಕೃಷಿ ಮೇಳಕ್ಕೆ ತೊಂದರೆಯಾಗಬಾರದು ಎಂದು ಜಯಲಕ್ಷ್ಮೀ ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/09/2024 08:41 pm