ಕುಂದಗೋಳ : ರಾಜ್ಯಾದ್ಯಂತ ಇರುವ ಅಂಗನವಾಡಿಗೆ ಇಂದು ಅಘೋಷಿತ ರಜೆ ಮಂಜೂರು ಆಗಿದ್ದು, ಅಂಗನವಾಡಿ ಬಿಟ್ಟು ಮಕ್ಕಳು ಮನೆಯಲ್ಲೇ ಕಾಲ ಕಳೆಯುವಂತಾಗಿದೆ.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ವಿಧಾನಸೌಧ ಚಲೋ ಚಳುವಳಿಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್'ನಲ್ಲಿ ಹಮ್ಮಿಕೊಂಡಿದ್ದು, ಕುಂದಗೋಳ ತಾಲೂಕಿನ 212 ಕಾರ್ಯಕರ್ತರು ವೇತನ ರಹಿತ ರಜೆ ಪಡೆದು ಚಳುವಳಿಯಲ್ಲಿ ಭಾಗವಹಿಸಿದ್ದಾರೆ.
ಸೇವಾ ನಿವೃತ್ತಿ ಆರ್ಥಿಕ ರಕ್ಷಣೆ, ಗೌರವಧನ, ವೇತನ ಹೆಚ್ಚಳ, ಮತ್ತು ಎಲ್.ಕೆ.ಜಿ ಮತ್ತು ಯು.ಕೆ.ಜಿ ಅಂಗನವಾಡಿಯಲ್ಲೇ ಆರಂಭ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಚಳುವಳಿಗೆ ಧುಮುಕಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸೇರಿದಂತೆ ಕುಂದಗೋಳ ತಾಲೂಕಿನ 212 ಅಂಗನವಾಡಿ ಬಂದ್ ಆಗಿರುವ ಪರಿಣಾಮ ಅಂಗನವಾಡಿಗೆ ಹಾಜರಾಗುವ 4747 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ, ಮತ್ತು 6 ತಿಂಗಳಿಂದ 3 ವರ್ಷದ ಮಕ್ಕಳು ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಒಟ್ಟಾರೆ ಕಳೆದ ಹಲವು ವರ್ಷಗಳಿಂದ ತಮ್ಮ ಬೇಡಿಕೆ ಈಡೇರಿಕೆಗಾಗಿ ಹೋರಾಟಕ್ಕೆ ಧುಮುಕುವ ಅಂಗನವಾಡಿ ಕಾರ್ಯಕರ್ತೆಯರ ಚುಳುವಳಿ ಗ್ರಾಮೀಣ ಮಕ್ಕಳ ಅಭಿವೃದ್ಧಿಗೆ ಪೆಟ್ಟು ಕೊಡುತ್ತಿದೆ.
ಈ ಬಗ್ಗೆ ಸರ್ಕಾರ ಗಮನಿಸಿ ಅಂಗನವಾಡಿ ಕಾರ್ಯಕರ್ತೆಯರ ಅಳಲು ಆಲಿಸಬೇಕಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
19/09/2024 01:25 pm