ಚಾಮರಾಜನಗರ : ಪಂಜಾಬ್ ಅಮೃತಸರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ವಿರೂಪಗೊಳಿಸಿರುವ ಕಿಡಿಗೇಡಿಯನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಎದುರು ಇರುವ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಂಘದ ಅಧ್ಯಕ್ಷ ಶಿವನಾಗಣ್ಣ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಷಣೆ ಮಾಡಿದರು. ನಂತರ ಅಂಬೇಡ್ಕರ್ ವಿರೋಧಿಗಳ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಶಿವನಾಗಣ್ಣ ಮಾತನಾಡಿ, ಪಂಜಾಬ್ ನ ಅಮೃತಸರದಲ್ಲಿ ಕಿಡಿಗೇಡಿಯೊಬ್ಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯ ಮೇಲೆ ಹತ್ತಿ ಸುತ್ತಿಗೆಯಿಂದ ಒಡೆದು ವಿರೂಪಗೊಳಿಸಿರುವ ವ್ಯಕ್ತಿಯನ್ನು ಗಲ್ಲಿಗೇರಿಸಬೇಕು. ಇತ್ತೀಚಿಗೆ ಅಂಬೇಡ್ಕರ್ ಅವರನ್ನು ವಿರೋಧಿಸುವ ಕೆಲಸ ನಡೆಯುತ್ತಿದೆ. ಅದನ್ನು ಕೇಂದ್ರ ಸರ್ಕಾರ ತಡೆಗಟ್ಟಬೇಕು. ಅಂಬೇಡ್ಕರ್ ಅವರ ಪುತ್ಥಳಿ ವಿರೂಪಗೊಳಿಸಿರುವ ಕಿಡಿಗೇಡಿಯನ್ನು ಪೊಲೀಸ್ ಇಲಾಖೆ ಎನ್ಕೌಂಟರ್ ಮಾಡಬೇಕಾಗಿತ್ತು ಎಂದು ಒತ್ತಾಯಿಸಿದರು.
PublicNext
30/01/2025 05:11 pm