ಚಾಮರಾಜನಗರ : ಸ್ವಾತಂತ್ರ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ ಪರಿಣಾಮ ಭಾರತ ಪ್ರಪಂಚದಲ್ಲೇ ಶಕ್ತಿಯುತವಾಗಿ ರಾಷ್ಟ್ರವಾಗಿ ಹೊರ ಹೊಮ್ಮಲು ಸಾಧ್ಯವಾಗಿದೆ ಎಂದು ಬೆಂಗಳೂರು ಜವಾಹರ್ ಲಾಲ್ ನೆಹರೂ ತಾರಾಲಯದ ನಿರ್ದೇಶಕ ಹಾಗೂ ಇಸ್ರೋ ನಿವೃತ್ತ ವಿಜ್ಞಾನಿ ಡಾ.ಬಿ.ಆರ್.ಗುರುಪ್ರಸಾದ್ ಅಭಿಪ್ರಾಯಪಟ್ಟರು.
ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಗ್ರಾವಿಟಿಸೈನ್ಸ್ ಫೌಂಡೇಷನ್, ಕಾಲೇಜು ಆಂತರೀಕ ಗುಣಮಟ್ಟ ಖಾತರಿಸಮಿತಿ, ಬೆಂಗಳೂರು ಜವಾಹರ್ ಲಾಲ್ ನೆಹರೂ ತಾರಾಲಯ ಸಹಯೋಗದಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ವಿಜ್ಞಾನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1930ರಲ್ಲಿ ಅಂದಿನ ವಿಜ್ಞಾನಿಗಳಾದ ಡಾ.ಹೋಮಿ ಜಹಾಂಗೀರ್ ಬಾಬಾ, ಡಾ.ವಿಕ್ರಂ ಸಾರಾಬಾಯಿ, ಸರ್ ಸಿ.ವಿ.ರಾಮನ್, ಜಗದೀಶ್ ಚಂದ್ರಬೋಸ್ ಸೇರಿದಂತೆ ಅನೇಕ ವಿಜ್ಞಾನಿಗಳು ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಆದರೆ ಆ ಸಂದರ್ಭದಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ ಪರಿಣಾಮ, ಭಾರತೀಯರು ಚಂದ್ರನ ಮೇಲೆ ಕಾಲಿಟ್ಟು, ಚಂದ್ರನಲ್ಲಿ ನೀರಿದೆ ಎಂದು ಸಾಬೀತುಪಡಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಇನ್ನೊಂದು ಭಾಗವಾದ ಅಂತರಿಕ್ಷಾ ಉಡಾವಣೆಯಲ್ಲೂ ಭಾರತ ಬೃಹತ್ ಸಾಧನೆ ಮಾಡಿದೆ ಎಂದ ಅವರು, ವಿಜ್ಞಾನ ಆಸಕ್ತದಾಯಕ ಕ್ಷೇತ್ರವಾಗಿದ್ದು, ಕಾಲೇಜಿನಲ್ಲಿ ಆಯೋಜಿಸಿರುವ ವಿಜ್ಞಾನ ಉಪಕರಣಗಳ ಪ್ರಾತ್ಯಕ್ಷಿಕೆ ವೀಕ್ಷಿಸಿ ಸಮಗ್ರ ಮಾಹಿತಿ ಪಡೆದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಬೃಹತ್ ರಾಷ್ಟ್ರವನ್ನಾಗಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿಜ್ಞಾನ ನಮ್ಮ ಜೀವನದ ಸುರಕ್ಷತೆಯ ಒಂದು ಬಹು ಮುಖ್ಯ ಭಾಗವಾಗಿದೆ. ಜ್ಞಾನ ನಮಗೆ ಅಗತ್ಯ ಮಾತ್ರವಲ್ಲದೆ ಅನಿವಾರ್ಯವೂ ಕೂಡ ಆಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಕಲಿಯುವ ಛಲ ಮತ್ತು ಅದನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ವಿಜ್ಞಾನ ಎನ್ನುವುದು ಎಂದೆಂದಿಗೂ ಸಾರ್ವಜನಿಕ ಸತ್ಯವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.
Kshetra Samachara
04/02/2025 04:48 pm