ಹಾವೇರಿ : ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ನಗರದ ಹೆಗ್ಗೇರಿ ನದಿ ಹಿಂಗಾರು ಮಳೆಗೆ ಕೋಡಿ ಬಿದ್ದಿದ್ದು, ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹಳ್ಳದ ಪಕ್ಕದಲ್ಲಿರುವ ಹುತಾತ್ಮ ಮೈಲಾರ ಮಹದೇವ ಸ್ಮಾರಕಕ್ಕೆ ನುಗ್ಗಿದೆ. ಜೊತೆಗೆ ಪಕ್ಕದಲ್ಲಿರುವ ಮೈಲಾರ ಮಹದೇವ ಸಂಕೀರ್ಣ ಸಹ ಜಲಾವೃತಗೊಂಡಿದೆ.
ಮೈಲಾರ ಮಹದೇವ ಮಹಾತ್ಮಾ ಗಾಂಧೀಜಿ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಏಕೈಕ ಕನ್ನಡಿಗರಾಗಿದ್ದರು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಮೈಲಾರ ಮಹದೇವಪ್ಪ ತಮ್ಮದೇ ಆದ ತಂಡ ಕಟ್ಟಿಕೊಂಡು ಬ್ರಿಟಿಷ್ ಆಡಳಿತಕ್ಕೆ ಇನ್ನಿಲ್ಲದ ತೊಂದರೆ ನೀಡಿದ್ದರು. ಇಂತಹ ಮೈಲಾರ ಮಹದೇವ, ತಿರಕಪ್ಪ ಮಡಿವಾಳರ ಮತ್ತು ವೀರಯ್ಯ ಹಿರೇಮಠ 1943ರ ಎಪ್ರೀಲ್ 1ರಂದು ಖಜಾನೆಗೆ ಮುತ್ತಿಗೆ ಹಾಕಿದಾಗ ಬ್ರಿಟಿಷರ ಗುಂಡೇಟಿಗೆ ಬಲಿಯಾಗಿದ್ದರು.
ದೇಶಪ್ರೇಮಿಗಳು ಅವರ ಶವ ತಂದು ಹಾವೇರಿಯ ಹೊರವಲಯದಲ್ಲಿರುವ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಿದ್ದರು. ಅವರ ಅಂತ್ಯಕ್ರಿಯೆ ನಡೆಸಿದ ಸ್ಥಳವನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ವೀರಸೌಧ ಮತ್ತು ಸಂಕೀರ್ಣ ನಿರ್ಮಿಸಿತ್ತು. ಆದರೆ ಈ ವೀರಸೌಧ ಮತ್ತು ಸಂಕೀರ್ಣ ಮಳೆನೀರಿನಲ್ಲಿ ಜಲಾವೃತಗೊಂಡಿದ್ದು, ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ವೀರರಿಗೆ ಅವಮಾನವಾಗಿದೆ ಎಂದು ದೇಶಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
22/10/2024 10:08 pm