ಹಾವೇರಿ: ಹಾವೇರಿ ಜಿಲ್ಲೆಯ ವಿವಿಧೆಡೆ ಸಂಜೆಯಾಗುತ್ತಿದ್ದಂತೆ ಮಳೆರಾಯನ ಆರ್ಭಟ ಶುರುವಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಹಾವೇರಿ ನಗರ ರಾಣೆಬೆನ್ನೂರು ಸೇರಿದಂತೆ ವಿವಿಧೆಡೆ ವ್ಯಾಪಕ ಮಳೆಯಾಗುತ್ತಿದೆ. ಮಳೆರಾಯನ ಆರ್ಭಟಕ್ಕೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಫಸಲು ಹೊತ್ತು ನಿಂತಿರುವ ಮೆಕ್ಕೆಜೋಳ, ಹತ್ತಿ, ಸೋಯಾಬಿನ್, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಮಳೆಗಾಹುತಿಯಾಗುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಮಳೆರಾಯನ ಆರ್ಭಟದ ನಡುವೆ ಹಾವೇರಿ ಸಮೀಪದ ಕನಕಾಪುರ ಗ್ರಾಮದ ಬಳಿಯ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಸಾವಿರಾರು ಎಕರೆ ಜಮೀನಿಗೆ ನುಗ್ಗಿದೆ. ಕಷ್ಟ ಪಟ್ಟು ಬೆಳೆದ ಬೆಳೆಗಳೆಲ್ಲಾ ಕಾಲುವೆ ನೀರಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೇನು ಮೆಕ್ಕೆಜೋಳ ಮತ್ತು ಸೋಯಾಬಿನ್ ಬೆಳೆಗಳ ಕಾಳುಗಳನ್ನು ಯಂತ್ರಕ್ಕೆ ಹಾಕಿಸ ಬೇಕಾಗಿತ್ತು. ಅಷ್ಟರಲ್ಲಿ ಕಾಲುವೆ ಒಡೆದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಅವೈಜ್ಞಾನಿಕ ಕಾಮಗಾರಿ ನಡುವೆ ಕಳಪೆ ಕಾಮಗಾರಿ ನಡೆದಿದ್ದು ಕಾಲುವೆ ಒಡೆಯಲು ಕಾರಣ ಎಂದು ರೈತರು ಆರೋಪಿಸಿದರು. ಕಾಲುವೆ ಒಡೆದು ಎರಡು ದಿನವಾದರೂ ರೈತರ ಜಮೀನಿಗೆ ನುಗ್ಗುತ್ತಿರುವ ನೀರು ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಮತ್ತು ತುಂಗಾ ಮೇಲ್ದಂಡೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ರೈತರು ದೂರಿದರು. ಬೆಳೆ ಹಾನಿಯಾದ ರೈತರ ಪ್ರತಿ ಎಕರೆ ಜಮೀನಿಗೆ ಕನಿಷ್ಠ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
PublicNext
13/10/2024 07:12 pm