ಕಾರವಾರ: ಶಿರೂರು ಗುಡ್ಡು ಕುಸಿತ ಪ್ರಕರಣದಲ್ಲಿ ಕೇರಳದ ಲಾರಿ ಹಾಗೂ ಚಾಲಕ ಅರ್ಜುನ ಅವರ ಮೃತದೇಹ ಹುಡುಕಲು ಜಿಲ್ಲಾಡಳಿತ ತೋರಿದ ಕಾಳಜಿಯು ಸ್ಥಳೀಯರ ಮೃತದೇಹ ಹುಡುಕಲು ತೋರಿಸುತ್ತಿಲ್ಲ ಎಂದು ಆರ್ಯ ಈಡಿಗ ನಾಮಾಧಾರಿ ಸಂಘದ ಮುಖಂಡ ರಾಜೇಂದ್ರ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಕಾರವಾರದಲ್ಲಿ ಮಾತನಾಡಿದ ಅವರು, ಅರ್ಜುನ ಅವರ ಮೃತದೇಹ ಹುಡುಕಲು ಒತ್ತಡ ಬಂದಾಗ ಡ್ರಜ್ಜಿಂಗ್ ಯಂತ್ರ ತಂದು ಲಾರಿ ಮತ್ತು ಅರ್ಜುನ ಅವರ ಮೃತದೇಹ ಹುಡುಕಿದ್ದಾರೆ. ಬಳಿಕ ಎರಡು ದಿನ ಮಾತ್ರ ಕಾರ್ಯಾಚರಣೆ ಮುಂದುವರೆಸಿ ರಾತ್ರೋರಾತ್ರಿ ಡ್ರಜ್ಜಿಂಗ್ ಯಂತ್ರ ವಾಪಾಸ್ ಕಳಿಸಲಾಗಿದೆ ಎಂದರು.
ಕಾರ್ಯಾಚರಣೆ ಮುಂದುವರೆಸಿದ್ದರೆ ನಮ್ಮವರ ಮೃತದೇಹಗಳು ಕೂಡ ಸಿಗುತ್ತಿದ್ದವು. ಹಿಂದೂ ಧರ್ಮದ ಪ್ರಕಾರ ಮೃತದೇಹ ಸಿಗದೇ ಮುಕ್ತಿ ಸಿಗುವುದಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಅವರಿಗೆ ಈ ಬಗ್ಗೆ ಮನವಿ ನೀಡಿದ್ದೇವೆ. ಜೊತೆಗೆ ನದಿಯಲ್ಲಿದ್ದ ಮಣ್ಣನ್ನು ತೆರವುಗೊಳಿಸುವಂತೆಯೂ ತಿಳಿಸಲಾಗಿದೆ. ಮಣ್ಣು ತೆರವು ಮಾಡದಿದ್ದರೆ ಮಳೆಗಾಲದಲ್ಲಿ ನೆರೆ ಹಾವಳಿ ಎದುರಾಗಲಿದೆ. ಹೀಗಾಗಿ ಮಣ್ಣು ತೆಗೆದು, ಮೃತದೇಹ ಹುಡುಕದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
Kshetra Samachara
22/10/2024 07:13 pm