ಬೆಂಗಳೂರು: ನಗರದ ಯಲಹಂಕ ವಲಯ ವ್ಯಾಪ್ತಿಯಲ್ಲಿ ಇಂದು ಸಂಜೆಯಿಂದ ಜೋರು ಮಳೆಯಾಗುತ್ತಿದ್ದು, ವಲಯ ಆಯುಕ್ತ ಕರೀಗೌಡ, ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್ ಅವರು ನಿಯಂತ್ರಣ ಕೊಠಡಿಯಲ್ಲಿದ್ದು, ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಮಸ್ಯೆಯಾಗಿರುವ ಕಡೆ ಅಧಿಕಾರಿಗಳು ಸ್ಥಳದಲ್ಲಿದ್ದು, ಸಮಸ್ಯೆಯನ್ನು ಬಗೆಹರಿಸುತ್ತಿದ್ದಾರೆ.
ಸಹಕಾರ ನಗರದ ಎನ್.ಟಿ.ಐ ಕೆಳಸೇತುವೆ ನಿಂತಿರುವ ನೀರನ್ನು ತೆರವುಗೊಳಿಸಲಾಗುತ್ತಿದೆ. ಜುಡಿಶಿಯಲ್ ಲೇಔಟ್ ಬಳಿ ಜಿಕೆವಿಕೆಯ ಹಳೆಯ ಸುಮಾರು 100 ಅಡಿ ಕಾಂಪೌಂಡ್ ಗೋಡೆ ಕುಸಿದು ರಸ್ತೆ ಮೇಲೆ ಬಿದ್ದಿದ್ದು, ಅದನ್ನು ಜೆಸಿಬಿ ಮೂಲಕ ರಸ್ತೆ ಬದಿಗೆ ತಳ್ಳಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕೊಡಿಗೆಹಳ್ಳಿಯ ಚಿತ್ರಕೂಟ ರೆಸಿಡೆನ್ಸಿಯ ಗೋಡೆ ಬಿದ್ದಿರುವ ಪರಿಣಾಮ ಪಕ್ಕದಲ್ಲಿರುವ ನೀರುಗಾಲುವೆಯಿಂದ ಅಪಾರ್ಟ್ಮೆಂಟ್ ಸೆಲ್ಲಾರ್ ಗೆ ನೀರು ಬಂದಿದ್ದು, ಪಂಪ್ ಮೂಲಕ ನೀರು ತೆರವುಗೊಳಿಸಲಾಗಿದೆ. ಇದೇ ಸ್ಥಳದಲ್ಲಿ ಕೈಸರ್ ರೆಸಿಡೆನ್ಸಿ ಬೇಸ್ಮೆಂಟ್ ಗೆ ನೀರು ಬಂದಿದ್ದು, ಪಂಪ್ ಮೂಲಕ ನೀರು ತೆರವುಗೊಳಿಸಲಾಗುತ್ತಿದೆ.
ಕೊಡಿಗೆಹಳ್ಳಿ ಕೆಳ ಸೇತುವೆಯಲ್ಲಿ ನಿಂತಿದ್ದ ನೀರನ್ನು ತೆರವುಗೊಳಿಸಲಾಗಿದೆ.ಯಲಹಂಕ ಕೆಳ ಸೇತುವೆಯಲ್ಲಿ ನಿಂತಿದ್ದ ನೀರನ್ನು ತೆರವುಗೊಳಿಸಲಾಗಿದೆ. ಇನ್ನು ಬಸವ ಸಮಿತಿಯ ಬಳಿ 9 ಮನೆ, ವೆಂಕಟಶಾಮಪ್ಪ ಲೇಔಟ್ ನಲ್ಲಿ 10 ಮನೆ, ಎಂ.ಎಸ್ ಪಾಳ್ಯದಲ್ಲಿ 8 ಮನೆ ಹಾಗೂ ಟೆಲಿಕಾಂ ಲೇಔಟ್ ನಲ್ಲಿ 1 ಮನೆಗೆ ನೀರು ನುಗ್ಗಿದ್ದು, ಅಧಿಕಾರಿಗಳು ನೀರನ್ನು ತೆರವುಗೊಳಿಸುವ ಕೆಲಸ ಮಾಡುತ್ತಿದ್ದಾರೆ.
PublicNext
21/10/2024 10:43 pm