ಭಟ್ಕಳ: ಕ್ಯಾಶು ಆಯಿಲ್ ತುಂಬಿದ ಟ್ಯಾಂಕರ್ ವೊಂದು ಮುಂದೆ ಹೋಗುತ್ತಿದ್ದ ಬಸ್ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮೂಢ ಭಟ್ಕಳ ಬೈಪಾಸ್ ಸಮೀಪ ನಡೆದಿದೆ.
ಪ್ರಾಣಾಪಾಯದಿಂದ ಪಾರಾಗಿರುವ ಲಾರಿ ಚಾಲಕ ರಾಜಸ್ಥಾನ ಮೂಲದ ಮದನ ಎಂದು ತಿಳಿದು ಬಂದಿದೆ. ಈತ ಮಂಗಳೂರಿನಿಂದ ಕ್ಯಾಶು ಆಯಿಲ್ ತುಂಬಿದ ಟ್ಯಾಂಕರ್ ತೆಗೆದುಕೊಂಡು ಹರಿಯಾಣ ಕಡೆಗೆ ಹೋಗುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ.
ಈತ ಪುರವರ್ಗ ಕಡೆಯಿಂದ ಮೂಢ ಭಟ್ಕಳ ಬೈಪಾಸ್ ಕಡೆಗೆ ಬರುತ್ತಿದ್ದ ವೇಳೆಗೆ ಮುಂಬದಿಯಲ್ಲಿ ಹೋಗುತ್ತಿದ್ದ ಬಸ್ ಚಾಲಕ ರಾಷ್ಟ್ರೀಯ ಹೆದ್ದಾರಿಗೆ ಹಾಕಲಾಗಿದ್ದ ಹಂಪ್ ನೋಡಿ ತಕ್ಷಣ ಬ್ರೇಕ್ ಹಾಕಿದ್ದಾನೆ. ಇದನ್ನು ಗಮನಿಸಿದ ಟ್ಯಾಂಕರ್ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಬಸ್ ತಪ್ಪಿಸಲು ಹೋಗಿ ತನ್ನ ಎಡ ಭಾಗಕ್ಕೆ ತೆಗೆದುಕೊಂಡಿದ್ದಾನೆ. ಆದರೆ ಟ್ಯಾಂಕರ್ ನಿಯಂತ್ರಣ ತಪ್ಪಿ ಅಲ್ಲೇ ಇದ್ದ ಸಣ್ಣ ಪ್ರಪಾತಕ್ಕೆ ಬಿದ್ದಿದೆ. ಇದರಿಂದಾಗಿ ಕ್ಯಾಶು ಆಯಿಲ್ ತುಂಬಿದ ಟ್ಯಾಂಕರ್ ರಂಧ್ರವಾಗಿ ಸೋರಿಕೆಯಾಗಿದೆ. ಈ ಅಪಘಾತದಲ್ಲಿ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಪಲ್ಟಿಯಾಗಿದ್ದ ಟ್ಯಾಂಕರ್ ನ ಡೀಸೆಲ್ ತೆಗೆದು ಯಾವುದೇ ಅನಾಹುತ ನಡೆಯದಂತೆ ಮುಂಜಾಗ್ರತೆ ವಹಿಸಿದ್ದಾರೆ.
ಅಪಘಾತಕ್ಕೆ ಐ.ಆರ್.ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
19/10/2024 04:39 pm