ಭಟ್ಕಳ: ಭಟ್ಕಳ ಕರಾವಳಿ ಕಾವಲು ಪೊಲೀಸರು ಸಮುದ್ರ ಮೂಲಕ ನುಸುಳಿಕೊಂಡು ಬರುತ್ತಿದ್ದ ಆರು ಮಂದಿ ನಕಲಿ ಭಯೋತ್ಪಾದಕರನ್ನು ಗುರುವಾರ ಬೆಳಗಿನ ಜಾವ 1.30ರ ಸುಮಾರಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರಾವಳಿ ಭಾಗದಲ್ಲಿ ರಕ್ಷಣೆ ಮತ್ತು ಭದ್ರತೆ ಕುರಿತು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮಕೈಗೊಳ್ಳುವ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್16 ಮತ್ತು 17ರಂದು ರಕ್ಷಣಾ ವ್ಯವಸ್ಥೆಯ ಅಣಕು ಪ್ರದರ್ಶನ ‘ಸಾಗರ ಕವಚ’ ವನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಭಾರತೀಯ ನೌಕಾಪಡೆ, ಕೋಸ್ಟ್ ಗಾರ್ಡ್ ಮತ್ತು ರಾಜ್ಯದ ಕರಾವಳಿ ಕಾವಲು ಪೊಲೀಸ್ ಪಡೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಕರಾವಳಿ ಕಾವಲು ಪೊಲೀಸರು ಕಟ್ಟೆಚ್ಚರದಿಂದ ತಪಾಸಣೆ ಮಾಡುತ್ತಿದ್ದ ವೇಳೆ ಸಮುದ್ರ ಮಾರ್ಗದಿಂದ ನುಸುಳುತ್ತಿದ್ದ 6 ಮಂದಿ ನಕಲಿ ಭಯೋತ್ಪಾದಕರನ್ನು ಭಟ್ಕಳ ಕರಾವಳಿ ಪೊಲೀಸರು ಗುರುವಾರ ಬೆಳಗಿನ ಜಾವ 1.30ರ ಸುಮಾರಿಗೆ ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕರಾವಳಿ ಪೊಲೀಸ್ ಅಧೀಕ್ಷಕರಾದ ಮಿಥುನ್ ಹೆಚ್.ಎನ್. ಐಪಿಎಸ್, ಭಟ್ಕಳ ಸಿ.ಎಸ್.ಪಿ. ಪೊಲೀಸ್ ನಿರೀಕ್ಷಕ ಕುಸುಮಾಧರ ಕೆ. ಹಾಗೂ ಸಿಬ್ಬಂದಿ, KND ಮತ್ತು ತಾಂತ್ರಿಕ ಸಿಬ್ಬಂದಿ ಭಾಗಿಯಾಗಿದ್ದರು.
ಮುಂಬೈ ದಾಳಿಯ ಬಳಿಕ ಈ ಅಣಕು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಇದರಲ್ಲಿ ‘ರೆಡ್ ಫೋರ್ಸ್ ಹಾಗೂ ಬ್ಲೂ ಫೋರ್ಸ್’ ಎಂದು ಎರಡು ಗುಂಪುಗಳನ್ನು ಮಾಡಲಾಗಿದ್ದು, ‘ರೆಡ್ ಫೋರ್ಸ್’ನ ನೌಕಾನೆಲೆ ಸಿಬ್ಬಂದಿ ಮಾರುವೇಷದಲ್ಲಿ ಬಂದು ಬಾಂಬ್ ಮಾದರಿಯ ಪೆಟ್ಟಿಗೆಗಳನ್ನು ಆಯ್ದ ಸ್ಥಳಗಳಲ್ಲಿ ಇಡಲಿದ್ದಾರೆ. ‘ಬ್ಲೂ ಪೋರ್ಸ್’ನ ಪೊಲೀಸ್ ಸಿಬ್ಬಂದಿ ಅದನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಾರೆ.
PublicNext
17/10/2024 06:23 pm