ಮಂಗಳೂರು: ಇನ್ನೇನು ದೀಪಾವಳಿ ಹಬ್ಬ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯದಲ್ಲಿ ಸಾಲು ಸಾಲು ರಜೆಗಳಿದ್ದು, ಬೆಂಗಳೂರಿನಿಂದ ಮಂಗಳೂರಿಗೆ ಬರುವವರು ಈಗಾಗಲೇ ಬಸ್ಗಳ ಮುಗಂಡ ಟಿಕೆಟ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರವೂ ಗಗನಕ್ಕೇರಿದೆ. ಆದ್ದರಿಂದ ಖಾಸಗಿ ಬಸ್ ಕಂಪೆನಿಗಳು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕೋದನ್ನು ತಪ್ಪಿಸಲು ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ರೈಲು ಸೇವೆಯನ್ನು ದೀಪಾವಳಿ ಸಂದರ್ಭ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಬ್ರಿಜೇಶ್ ಚೌಟ ಕೇಂದ್ರ ರೈಲ್ವೇ ಸಚಿವಾಲಯ ಕ್ಕೆ ಮನವಿಯನ್ನು ಸಲ್ಲಿಸಿದ್ದರು. ಈ ಮನವಿಗೆ ಈಗ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲು ಒಪ್ಪಿಗೆ ನೀಡಿದೆ.
ಅಕ್ಟೋಬರ್ 30ರಂದು ರಾತ್ರಿ 11.50ಕ್ಕೆ ರೈಲು ಸಂಖ್ಯೆ(06565) ಬೆಂಗಳೂರಿನ ಯಶವಂತಪುರದಿಂದ ರೈಲು ಹೊರಡಲಿದೆ. ಆ ರೈಲು ಮರುದಿನ 11.45ಕ್ಕೆ ಮಂಗಳೂರು ತಲುಪಲಿದೆ. ಅಕ್ಟೋಬರ್ 31ರಂದು ರೈಲು ಸಂಖ್ಯೆ(06566) ಮಂಗಳೂರಿನಿಂದ ಮಧ್ಯಾಹ್ನ 1ಗಂಟೆಗೆ ಹೊರಟು ಅದೇ ದಿನ ರಾತ್ರಿ 9.15ಕ್ಕೆ ಯಶವಂತಪುರ ತಲುಪಲಿದೆ.
ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರ ಅನುಕೂಲತೆಗಾಗಿ ವಿಶೇಷ ರೈಲು ಸಂಚಾರದ ವ್ಯವಸ್ಥೆ ಮಾಡುವಂತೆ ಬ್ರಿಜೇಶ್ ಚೌಟ ನೈರುತ್ಯ ರೈಲ್ವೇ ವಲಯ ಹಾಗೂ ರೈಲ್ವೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇದೀಗ ಸಂಸದರ ಮನವಿಗೆ ಸ್ಪಂದಿಸಿ ರೈಲ್ವೇ ಇಲಾಖೆ ವಿಶೇಷ ರೈಲ್ವೇ ಸೇವೆಯನ್ನು ನೀಡಿದೆ.
PublicNext
18/10/2024 05:11 pm