ಬೈಲಹೊಂಗಲ: ತಾಲೂಕಿನ ದೇಶನೂರ ಗ್ರಾಮದಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ 5 ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೇಶನೂರ ಗ್ರಾಮದ ಅಡಿವೇಪ್ಪ ಕಾರಿ ಎಂಬುವರಿಗೆ ಸೇರಿದ ವಾಸದ ಮನೆ ಕುಸಿದು ಬಿದ್ದಿದೆ. ಮಲಗಿಕೊಳ್ಳುವ ಮುಂಚೆ ಎಲ್ಲರೂ ಎಚ್ಚರ ಇರುವಾಗಲೇ ಈ ಘಟನೆ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ.
ಶಿಥಿಲಗೊಂಡ ಮನೆ ಸರಿಪಡಿಸುವಂತೆ ಕಳೆದ ವರ್ಷದ ಪ್ರವಾಹದ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಮತ್ತು ರೆವಿನ್ಯೂ ಅಧಿಕಾರಿಯ ಗಮನಕ್ಕೆ ತರಲಾಗಿತ್ತು. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಕೂಡ ಮನವಿ ಪತ್ರ ನೀಡಲಾಗಿದೆ. ಕಳೆದ ವರ್ಷ ಪರಿಹಾರ ನೀಡುವುದಾಗಿ ತಿಳಿಸಿ ಭಾವಚಿತ್ರ ತೆಗೆದುಕೊಂಡು ಹೋದ ಕಂದಾಯ ಅಧಿಕಾರಿಗಳು, ಪರಿಹಾರವನ್ನೂ ನೀಡಿಲ್ಲ ಹಾಗೂ ವಾಸದ ಮನೆಯ ಸೌಲಭ್ಯವನ್ನೂ ಕೊಟ್ಟಿಲ್ಲ.
ಜೀವ ಹಾನಿ ಆಗಿದ್ದರೆ ಯಾರು ಹೊಣೆ ಎಂದು ದೇಶನೂರ ಗ್ರಾಮಸ್ಥರು ಮತ್ತು ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬಸ್ಥರು ಕಂದಾಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ತಾಲೂಕು ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಬಡ ರೈತ ಕುಟುಂಬಕ್ಕೆ ಆಸರೆಯಾಗಬೇಕಿದೆ.
Kshetra Samachara
17/10/2024 09:30 pm