ರಾಯಬಾಗ : ರಾಯಬಾಗ ತಾಲೂಕಿನ ಬಿರಡಿ ಗ್ರಾಮದ ದಲಿತ ಕಾಲೋನಿಯ ಅಂಗನವಾಡಿ ಕೇಂದ್ರ ತೆರವುಗೊಳಿಸಿ ಅನಧಿಕೃತವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆ ಕಳೆದ ಐದು ದಿನಗಳ ಹಿಂದೆ ಮಳೆಯನ್ನು ಲೆಕ್ಕಿಸದೆ ಸ್ಥಳೀಯರು ಪ್ರತಿಭಟನೆಗೆ ಇಳಿದಿದ್ದರು.
ಸತತ ಐದು ದಿನಗಳ ಪರಿಯಂತ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರು ಅಂಗನವಾಡಿ ಕೇಂದ್ರ ಮೊದಲು ಇದ್ದ ಜಾಗದಲ್ಲಿಯೇ ಇರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರು,ಸದಸ್ಯರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅರುಣ್ ಮಾಚಕನೂರ, ಸಮಾಜ ಕಲ್ಯಾಣ ಅಧಿಕಾರಿ ವಿಠ್ಠಲ ಚಂದರಗಿ, ಸಿಡಿಪಿಓ ಭಾರತಿ ಕಾಂಬಳೆ ಸ್ಥಳೀಯರು ಸೇರಿ ಸಭೆ ನಡೆಸಿದರು.
ಬಳಿಕ ಮಾತನಾಡಿದ ಅಧ್ಯಕ್ಷ ಸದಾಶಿವ ದೇಶಿಂಗೆ ಒಂದು ತಿಂಗಳ ಕಾಲಾವಕಾಶ ನೀಡಬೇಕು ನಂತರ ಸಭೆ ಕರೆದು ಎಲ್ಲರೊಂದಿಗೆ ಚರ್ಚೆ ನಡೆಸಿ ಅಂಗನವಾಡಿಯ ಜಾಗದಲ್ಲಿ ಗ್ರಾಮ ಪಂಚಾಯತ್ ವಾಣಿಜ್ಯ ಮಳಿಗೆ ನಿರ್ಮಿಸಿ ಪರ್ಯಾಯ ಜಾಗದಲ್ಲಿ ಹೈಟೆಕ್ ಅಂಗನವಾಡಿ ನಿರ್ಮಿಸಿಕೊಡುವುದಾಗಿ ಹೇಳುವ ಮೂಲಕ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಯಾವುದಕ್ಕೂ ಜಗ್ಗದ ಪ್ರತಿಭಟನಾಕಾರರು ಮೊದಲು ಇದ್ದ ಜಾಗದಲ್ಲಿಯೇ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಂಚಾಯತ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮುಂದುವರಿಸಿದರು.
ತಡವಾಗಿ ಆಗಮಿಸಿದ ರಾಯಬಾಗ ತಹಶೀಲ್ದಾರ್ ಸುರೇಶ್ ಮುಂಜೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸ ಮಾಡಿದರು. ಆದರೆ ಅದಕ್ಕೂ ಜಗ್ಗದ ಪ್ರತಿಭಟನಾಕಾರರು ಐದನೇ ದಿನವೂ ಪ್ರತಿಭಟನೆ ಮುಂದುವರಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಮಹಾವೀರ ಐಹೋಳೆ, ಸಂಜು ಕಾಂಬಳೆ, ಕೃಷ್ಣಾ ಗಸ್ತೆ, ರಾಜು ಮೈಶಾಳೆ, ಅಶೋಕ ಶಿಂಧೆ, ಮಹಾದೇವ ಇಟೇಕರಿ, ರಮೇಶ ಕಾಂಬಳೆ, ಸಿದ್ರಾಮ ಗಸ್ತಿ, ಲಕ್ಷ್ಮಣ ಇಂಗಳೆ, ತಾನಾಜಿ ಮೈಶಾಳೆ, ಕುಮಾರ್ ಬಾನೆ, ಗೀತಾ ಕಾಂಬಳೆ, ಇಂದಿರಾ ಮೈಶಾಳೆ, ಗಣೇಶ ದೇವರುಷಿ, ಕೆಂಪಣ್ಣ ಮಾಂಗ ನೂರಾರು ಕಾರ್ಯಕರ್ತರು ಮಹಿಳೆಯರು ಉಪಸ್ಥಿತರಿದ್ದರು.
ವರದಿ: ಚಿದಾನಂದ ಐಹೊಳೆ, ಪಬ್ಲಿಕ್ ನೆಕ್ಸ್ಟ್, ರಾಯಬಾಗ
Kshetra Samachara
22/10/2024 08:12 pm