ಚಿತ್ರದುರ್ಗ: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಗುರುವಾರ ನಗರದಲ್ಲಿ ನಡೆದ ವಾಲ್ಮೀಕಿ ಭಾವಚಿತ್ರ ಹಾಗೂ ಪುತ್ಥಳಿ ಮೆರವಣಿಗೆ ವಿವಿಧ ಜಾನಪದ ಕಲಾತಂಡಗಳ ಸಮ್ಮುಖದಲ್ಲಿ ಸಡಗರ-ಸಂಭ್ರಮದಿಂದ ಭವ್ಯ ಮೆರವಣಿಗೆ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ನಾಯಕ ಸಮಾಜದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಭಾವಚಿತ್ರ ಹಾಗೂ ಪುತ್ಥಳಿ ಮೆರವಣಿಗೆಗೆ ನಗರದ ಐತಿಹಾಸಿಕ ಕೋಟೆ ಮುಂಭಾಗದಲ್ಲಿ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಖಾಸ ಬೇಡರ ಪಡೆ, ಕಹಳೆ ವಾದನ, ತ್ರಾಷ್ ಡೋಲು, ಗೊಂಬೆ ಕುಣಿತ, ಕರಡಿ ಮಜಲು, ಪಟ ಕುಣಿತ ಮೆರವಣಿಗೆಯ ಮೆರಗು ಹೆಚ್ಚಿಸುವ ಮೂಲಕ ಸಾಂಸ್ಕೃತಿಕ ರಂಗವನ್ನು ತುಂಬಿದವು.
ಐತಿಹಾಸಿಕ ಕೋಟೆ ಮುಂಭಾಗದಿಂದ ಆರಂಭವಾದ ಅದ್ದೂರಿ ಮೆರವಣಿಗೆಯು, ಏಕನಾಥೇಶ್ವರಿ ದೇವಸ್ಥಾನ, ಹುಚ್ಚೆಂಗಿಯಲ್ಲಮ್ಮ ದೇವಸ್ಥಾನದ ಮುಂಭಾಗದಿಂದ ಆನೆಬಾಗಿಲು, ಗಾಂಧಿವೃತ್ತ, ಎಸ್ಬಿಐ ವೃತ್ತ, ಪ್ರವಾಸಿ ಮಂದಿರ ಮಾರ್ಗವಾಗಿ ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವೃತ್ತದಿಂದ ವೇದಿಕೆ ಕಾರ್ಯಕ್ರಮ ನಡೆಯುವ ನಗರದ ತರಾಸು ರಂಗಮಂದಿರದವರೆಗೆ ನಡೆಯಿತು.
PublicNext
17/10/2024 12:32 pm