ಬೆಂಗಳೂರು: ಮೇಕೆ ಕುರಿ ಮಾಂಸಕ್ಕೆ ಸಖತ್ ಡಿಮ್ಯಾಂಡ್ ಇದೆ. ಅದ್ರಲ್ಲೂ ಹಳೆ ಮೈಸೂರು ಭಾಗದ ಕುರಿ ಮೇಕೆ ಫುಲ್ ಡಿಮ್ಯಾಂಡ್. ಇದನ್ನೆ ಬಂಡವಾಳ ಮಾಡಿಕೊಂಡ ಖದೀಮರು ಕುರಿ ಮೇಕೆ ಕಳ್ಳತನವನ್ನೆ ಬ್ಯುಸಿನೆಸ್ ಮಾಡಿಕೊಂಡಿದ್ರು.ಸದ್ಯ ಕದ್ದ ಕುರಿ ಮೇಕೆಗಳನ್ನ ಹೊರ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದ ಆರು ಜನ ಆರೋಪಿಗಳನ್ನ ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿಂಧನೂರು ಮೂಲದ ಪರಶುರಾಮ, ಅಮರೇಶ್, ರಮೇಶ್, ಹುಲುಗಪ್ಪ, ವೆಂಕಟೇಶ್ ಹಾಗೂ ಈರಣ್ಣ ಬಂಧಿತರು. ಆರೋಪಿಗಳಿಂದ 2.43 ಲಕ್ಷ ನಗದು, 29 ಕುರಿ ಹಾಗೂ ಮೇಕೆಗಳು, ಕೃತ್ಯಕ್ಕೆ ಬಳಸುತ್ತಿದ್ದ 1 ವಾಹನವನ್ನ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ಹೊರವಲಯದ ಗ್ರಾಮಗಳಲ್ಲಿ ರೈತರು ಸಾಕಿರುವ ಕುರಿ, ಮೇಕೆಗಳನ್ನ ಕದ್ದೊಯ್ಯುತ್ತಿದ್ದ ಆರೋಪಿಗಳು, ಅವುಗಳನ್ನ ಕೊಪ್ಪಳ, ಹೊಸಪೇಟೆ, ಬಳ್ಳಾರಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಅದೇ ರೀತಿ ಸೆಪ್ಟೆಂಬರ್ 15ರಂದು ರಾತ್ರಿ ದೊಡ್ಡಜಾಲದ ರೈತರೊಬ್ಬರ ಮನೆ ಬಳಿ ಬಂದಿದ್ದ ಆರೋಪಿಗಳು ಸಾಕಿದ್ದ 15 ಮೇಕೆಗಳನ್ನ ಕದ್ದೊಯ್ದಿದ್ದರು. ಕಳ್ಳತನದ ಕುರಿತು ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ ಆರೋಪಿಗಳನ್ನ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
16/10/2024 03:05 pm