ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಬನ್ನಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವೋಪೇತವಾಗಿ ಜರುಗಿತು.
ವಿಜಯ ದಶಮಿಯ ಬಹುಮುಖ್ಯ ಘಟ್ಟವಾದ ಬನ್ನಿ ಉತ್ಸವದಲ್ಲಿ ಸಾವಿರಾರು ಭಕ್ತರು ಬನ್ನಿ ಮುಡಿಯುವ ಮೂಲಕ ಶ್ರೀ ದೇವಿಗೆ ಉಧೋ.. ಉಧೋ... ಎಂದು ಜೈಕಾರ ಹಾಕಿದರು.
ಶಿವಮೊಗ್ಗ ಜಿಲ್ಲೆ ಸೇರಿದಂತೆ ನೆರೆಯ ಹಾವೇರಿ, ಹಿರೇಕೆರೂರು, ಬ್ಯಾಡಗಿ, ದಾವಣಗೆರೆ, ರಾಣೆಬೆನ್ನೂರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಬನ್ನಿ ಉತ್ಸವವನ್ನು ಕಣ್ತುಂಬಿಕೊಂಡರು. ಬನ್ನಿ ಉತ್ಸವಕ್ಕೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ, ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಉಪಾಧ್ಯಕ್ಷ ಎಂ.ಬಿ. ರೇಣುಕಾ ಪ್ರಸಾದ್, ನ್ಯಾರ್ಶಿ ಗ್ರಾಪಂ ಧನಂಜಯ್ ಡಿ. ನಾಯ್ಕ ಚಾಲನೆ ನೀಡಿದರು.
ಶ್ರೀ ರೇಣುಕಾಂಬ ದೇವಿ ಪಲ್ಲಕ್ಕಿ ಉತ್ಸವ ಆಗಮ ಶಾಸ್ತ್ರದ ವಿಧಿವಿಧಾನಗಳೊಂದಿಗೆ ಜರುಗಿತು. ವಿಶೇಷವಾಗಿ ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಆಚರಣಾ ಸಮಿತಿಯವರ ನೇತೃತ್ವದಲ್ಲಿ ದಸರಾ ಜಂಬೂ ಸವಾರಿ ಮೆರವಣಿಗೆ ಸಂಭ್ರಮದಿಂದ ನಡೆಯಿತು.
ಜಂಬೂ ಸವಾರಿ ಮೆರವಣಿಗೆಗೆ ಸಮಿತಿ ಅಧ್ಯಕ್ಷ ಡಾ.ಆರ್. ಶ್ರೀಧರ್ ಹುಲ್ತಿಕೊಪ್ಪ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಮುಖಂಡರು ಚಾಲನೆ ನೀಡಿದರು. ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳು ಹಾಗೂ ಭಕ್ತರಿಗೆ ಬನ್ನಿ ವಿತರಿಸಲಾಯಿತು. ಸಲಾಂ ಕಟ್ಟೆಬಳಿ ಅಧಿಕಾರಿಗಳು ಶ್ರೀ ದೇವಿಗೆ ಭಕ್ತಿಪೂರ್ವಕವಾಗಿ ಗೌರವ ಸಲ್ಲಿಸಿದರು.
ವರದಿ: ಮಧುರಾಮ್, ಪಬ್ಲಿಕ್ ನೆಕ್ಸ್ಟ್ ಸೊರಬ
PublicNext
13/10/2024 06:55 pm