ಸೊರಬ: ಕಳೆದ ಒಂಬತ್ತು ದಿನಗಳ ಕಾಲ ಸೊರಬ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ದಸರಾ ಉತ್ಸವಕ್ಕೆ ಶನಿವಾರ ತೆರೆಬಿದ್ದಿದೆ. ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ನಾಡ ದೇವತೆ ದುರ್ಗಾದೇವಿಯ ಮೆರವಣಿಗೆಯು ವಿವಿಧ ಜನಪದ ಕಲಾತಂಡಗಳೊಂದಿಗೆ ಹಾಗೂ ವಾದ್ಯ ಘೋಷಗಳೊಂದಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಸಾಗಿ ಬನ್ನಿ ಮಂಟಪದವರೆಗೆ ನಡೆಯಿತು.
ಶ್ರೀ ರಂಗನಾಥ ದೇವಸ್ಥಾನದಲ್ಲಿ ದಸರಾ ಉತ್ಸವ ಸಮಿತಿಯಿಂದ ದುರ್ಗಾದೇವಿಯನ್ನು ಪ್ರತಿಷ್ಟಾಪಿಸಲಾಗಿತ್ತು. ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ತಹಶೀಲ್ದಾರ್ ಮಂಜುಳಾ ಹೆಗಡಾಳ್ ಹಾಗೂ ಪುರೋಹಿತ ನಾರಾಯಣ ಭಟ್ ಮರಾಠೆ ಅವರು ಶಮಿ ವೃಕ್ಷಕ್ಕೆ ಬಿಲ್ಲು ಹೊಡೆಯುವ ಮೂಲಕ ಬನ್ನಿ ಮುಡಿಯುವುದಕ್ಕೆ ಚಾಲನೆ ನೀಡಿದರು. ಮಹಿಳೆಯರು ಮೈಸೂರು ಪೇಟ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಹಾಗೂ ಇನ್ನು ದಾರಿಯುದ್ದಕ್ಕೂ ಸಚಿವ ಮಧು ಬಂಗಾರಪ್ಪ ಚಂಡೆ, ತಾಳ ಬಾರಿಸುವ ಮೂಲಕ ಕಲಾತಂಡದವರೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಮೆರವಣಿಗೆಯಲ್ಲಿ ಪಟ್ಟಣದ ಶ್ರೀ ಲಕ್ಷ್ಮೀ ರಂಗನಾಥ, ಯಲ್ಲಮ್ಮ ದೇವಿ, ವಿಠ್ಠಲ ರುಖುಮಾಯಿ, ಪೇಟೆ ಬಸವೇಶ್ವರ, ದುರ್ಗಮ್ಮ, ಮಾರಿಕಾಂಬಾ, ನಾಗ ಚೌಡೇಶ್ವರಿ ಸೇರಿದಂತೆ ಪಟ್ಟಣದ ವಿವಿಧ ದೇವತೆಗಳ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ದಸರಾ ಉತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ಮೇಸ್ತ್ರಿ, ಪ್ರಧಾನ ಕಾರ್ಯದರ್ಶಿ ಪರಶುರಾಮ್ ಸಣ್ಣಬೈಲು, ಎನ್.ಷಣ್ಮುಖಾಚಾರ್. ಸೇರಿದಂತೆ ತಾಲೂಕಿನಾದ್ಯಂತ ಸಂಘ-ಸಂಸ್ಥೆಯವರು, ಮಹಿಳೆಯರು, ಮಕ್ಕಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ ಮಧು ರಾಮ್ ಪಬ್ಲಿಕ್ ನೆಕ್ಸ್ಟ್ ಸೊರಬ
PublicNext
13/10/2024 08:27 am