ಸಾಗರ : ಮಲೆನಾಡು ರೈತರ ಭೂಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರದಲ್ಲಿ ಸಕಾರಾತ್ಮಕ ಪ್ರಯತ್ನ ನಡೆಸಲಾಗುತ್ತದೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಜೊತೆ ಹಿರಿಯರ ಮಾರ್ಗದರ್ಶನದಲ್ಲಿ ಮಾತುಕತೆ ನಡೆಸಲಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಡಾ. ಎಚ್.ಗಣಪತಿಯಪ್ಪ ಸ್ಥಾಪಿತ ಜಿಲ್ಲಾ ರೈತ ಸಂಘ, ಮಲೆನಾಡು ಭೂರಹಿತರ ಹೋರಾಟ ವೇದಿಕೆ ಇನ್ನಿತರೆ ಸಂಘಟನೆಗಳ ಆಶ್ರಯದಲ್ಲಿ ಭೂಸಮಸ್ಯೆ ನಿವಾರಣೆಗೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಅರಣ್ಯ ಹಕ್ಕು ಭೂಮಂಜೂರಾತಿ ಮೂರು ತಲೆಮಾರಿನಿಂದ ಒಂದು ತಲೆಮಾರಿಗೆ ಇಳಿಸಬೇಕು ಎನ್ನುವ ಒತ್ತಾಯವನ್ನು ಕೇಂದ್ರದಲ್ಲಿ ಮೊದಲ ಬಾರಿಗೆ ನಾನು ಮಾತನಾಡಿದ್ದೇನೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮಲೆನಾಡು ರೈತರ ಸಮಸ್ಯೆಯನ್ನು ತಲುಪಿಸುವ ಕೆಲಸ ಮಾಡಿದ್ದು. ಶೀಘ್ರದಲ್ಲಿಯೇ ಮಲೆನಾಡಿನ ಸಂಸದರ ಜೊತೆ ಪಕ್ಷಾತೀತವಾಗಿ ರೈತರಿಗೆ ಮಾರಕವಾಗುತ್ತಿರುವ ಕಾಯ್ದೆ ತಿದ್ದುಪಡಿಗೆ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡುವುದಾಗಿ ತಿಳಿಸಿದ ಸಂಸದರು, ಪದೇಪದೇ ರೈತರ ಭೂಮಂಜೂರಾತಿ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ರಿಟ್ ಹಾಕುತ್ತಿರುವ ಪರಿಸರವಾದಿಗಳನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ರೈತರ ಭೂಹಕ್ಕಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವ ಭರವಸೆ ನೀಡಿದರು.
ಸಂಸದ ಬಿ ವೈ ರಾಘವೇಂದ್ರ ರವರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ, ಸಾಗರ ನಗರಸಭಾ ಸದಸ್ಯರಾದ ಶ್ರೀನಿವಾಸ್ ಮೇಸ್ತ್ರಿ, ಗಣೇಶ್ ಪ್ರಸಾದ್, ಟಿ ಡಿ ಮೇಘರಾಜ, ಲಿಂಗರಾಜ್, ಮಧುರ ಶಿವಾನಂದ್, ಮೈತ್ರಿ ಪಾಟಿಲ್ ಹಾಗೂ ಇನ್ನಿತರರು ಸಾಥ್ ನೀಡಿದರು.
PublicNext
22/10/2024 08:27 pm