ಸಾಗರ: ವಿಜಯದಶಮಿ... ಹೆಸರೇ ಹೇಳುವಂತೆ ವಿಜಯದ ಸಂಕೇತವಾಗಿರುವ ವಿಜಯ ದಶಮಿಯನ್ನು ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಯಿತು. ಸಾಗರದಲ್ಲೂ ಸಹ ದಸರಾ ಆಚರಿಸಲಾಯಿತು. ಇಲ್ಲಿನ ಸರ್ಕಾರಿ ಪ್ರವಾಸಿ ಮಂದಿರದ ಸಮೀಪದ ಬಳಿ ವಿಜಯದಶಮಿ ಪ್ರಯುಕ್ತ ಬನ್ನಿ ಮರದ ಕೊಂಬೆಗಳಿಂದ ಅಲಂಕೃತವಾದ ಬಾಳೆಯ ದಿಂಡನ್ನು ಕಡಿದು ದಸರಾ ಹಬ್ಬವನ್ನು ಆಚರಿಸಲಾಯಿತು.
ಸಾಗರ ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ಅವರು ಬನ್ನಿ ಮಂಟಪದ ಬಳಿ ಆಗಮಿಸಿ ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ಬನ್ನಿ ಮರದ ಪೂಜೆಯನ್ನು ನೆರವೇರಿಸಿದರು. ಪೂಜೆಯ ನಂತರ ಬನ್ನಿ ಮರವನ್ನು ಕಡಿಯಲಾಗುತ್ತದೆ. ಈ ಹಿಂದೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಮರದ ಕೊಂಬೆಗಳನ್ನು ಕಡಿಯಲಾಗುತ್ತಿತ್ತು. ಆದರೆ, ಈಗ ಬನ್ನಿ ಮರವನ್ನು ಕಡಿಯುವುದಿಲ್ಲ. ಬದಲಾಗಿ ಬನ್ನಿ ಎಲೆಗಳನ್ನು ಒಳಗೊಂಡ ಕೊಂಬೆಗಳಿಂದ ಅಲಂಕರಿಸಿರುವ ಬಾಳೆಯ ದಿಂಡನ್ನು ಕಡಿಯಲಾಗುತ್ತದೆ.
ಈ ಬನ್ನಿ ಎಲೆಗಳಿರುವ ಬಾಳೆ ದಿಂಡನ್ನು ಕಡಿದ ನಂತರ ಮರದ ಎಲೆಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ವಿಜಯ ನಮ್ಮದಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ತಹಶೀಲ್ದಾರ್ ಬನ್ನಿ ಕೊಂಬೆಗಳಿರುವ ದಿಂಡನ್ನು ಕತ್ತರಿಸಿದ ನಂತರ ಅನೇಕ ಭಕ್ತರಿಗೆ ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಬನ್ನಿ ಎಲೆಯನ್ನು ಭಕ್ತರಿಗೆ ಹಂಚಿದರು.
PublicNext
13/10/2024 12:56 pm