ಶಿವಮೊಗ್ಗ : ಸಾಂಪ್ರದಾಯವಾಗಿ ಪ್ರತಿ ವರ್ಷ ಆಚರಿಸುವ ಈ ಭೂಮಿ ಹುಣ್ಣಿಮೆ ಹಬ್ಬವನ್ನು ಮಲೆನಾಡು ಭಾಗದ ಪ್ರತಿಯೊಂದು ಹಳ್ಳಿಯಲ್ಲೂ ವಿಶೇಷವಾಗಿ ಆಚರಿಸುತ್ತಾರೆ. ತಮ್ಮ ಹೊಲ ಗದ್ದೆಗಳಲ್ಲಿ ತಾವೇ ಬಿತ್ತಿರುವ ಬೆಳೆ ಪೈರಾಗುವ ಸಂದರ್ಭದಲ್ಲಿ, ರೈತ ಕುಟುಂಬ ಸದಸ್ಯರೆಲ್ಲರೂ ಸೇರಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ತಾವೇ ಸಿಂಗರಿಸಿರುವ ಬುಟ್ಟಿಯೊಳಗೆ ಬುತ್ತಿಯನ್ನು ತಂದು ಬೆಳೆದ ಬೆಳೆಗೆ ನೈವೇದ್ಯ ಅರ್ಪಿಸುತ್ತಾರೆ.
ಒಂದರ್ಥದಲ್ಲಿ ಇದು ಭೂ ತಾಯಿಗೆ ಸೀಮಂತ ಎಂದೇ ಕರೆಯಲಾಗುತ್ತೆ. ಹೌದು, ಇದು ಮಲೆನಾಡಿನ ರೈತ ಸಮೂಹ ಪ್ರತಿ ವರ್ಷ ಆಚರಿಸುವ ವಿಶೇಷ ಭೂಮಿ ಹುಣ್ಣಿಮೆ ಹಬ್ಬ. ವರ್ಷ ಪೂರ್ತಿ ಭೂಮಿಯೊಂದಿಗೆ ಒಡನಾಟ ಇಟ್ಟುಕೊಳ್ಳುವ ರೈತರು ತಾವೇ ಬಿತ್ತಿರುವ ಬೀಜ ಮೊಳಕೆ ಒಡೆದು ಪೈರಾಗುವ ಸಮಯದಲ್ಲಿ ಬರುವ ಭೂಮಿ ಹುಣ್ಣಿಮೆ ಹಬ್ಬವನ್ನು ತಮ್ಮ ಕುಟುಂಬ ಸದಸ್ಯರೆಲ್ಲರೂ ಸೇರಿ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸುತ್ತಾರೆ.
ಮುಂಜಾನೆ ಸೂರ್ಯ ತನ್ನ ಕಿರಣಗಳನ್ನು ಪಸರಿಸುವ ಹೊತ್ತಲ್ಲಿ ಈ ಪೂಜೆ ಮಾಡಲಾಗುತ್ತದೆ. ರೈತರು ಪೂಜಾ ವಸ್ತುಗಳನ್ನು ಹಾಗೂ ನೈವೇದ್ಯಕ್ಕೆ ಬುತ್ತಿಯನ್ನು ಹೊತ್ತು ತಮ್ಮ ತಮ್ಮ ಹೊಲ-ಗದ್ದೆಗಳಿಗೆ ಬರುತ್ತಾರೆ. ಬೆಳೆಗೆ ಹಸಿರು ಬಳೆ, ಸೀರೆ, ಕುಪ್ಪಸ ಮತ್ತು ತಾಳಿಯನ್ನು ಇಟ್ಟು ಮಹಿಳೆಯರು, ಮಕ್ಕಳು ಸೇರಿದಂತೆ ಮನೆ ಮಂದಿಯೆಲ್ಲ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಮಂಗಳಾರತಿ ಮಾಡುವ ಮೂಲಕ ವರ್ಷ ಪೂರ್ತಿ ಬೆಳೆದ ಬೆಳೆಯನ್ನು ರಕ್ಷಿಸು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಅಕ್ಕಿ ಹಿಟ್ಟಿನಿಂದ ಬಿಡಿಸಿದ ರಂಗೋಲಿಯಿಂದ ಚಿತ್ರಿಸಲಾದ ಬುಟ್ಟಿಯೊಳಗೆ ಬುತ್ತಿಯನ್ನು ತಂದು ಭೂತಾಯಿಗೆ ಅರ್ಪಿಸುತ್ತಾರೆ.
PublicNext
17/10/2024 04:46 pm