ನಂಜನಗೂಡು: ಇಡೀ ಗ್ರಾಮದ ಜನ ಗಾಢ ನಿದ್ರೆಯಲ್ಲಿದ್ದಾಗ ಭಾರೀ ಪ್ರಮಾಣದ ಶಬ್ಧ ಕೇಳಿ ಬೆಚ್ಚಿ ಬಿದ್ದು ಹೊರಬಂದು ನೋಡಿದರೆ ಅನಾದಿಕಾಲದ ಮಣ್ಣಿನ ಮನೆಯ ಗೋಡೆ ಕುಸಿತ ಕಂಡಿದೆ..! ನಿದ್ರೆಯಲ್ಲಿದ್ದವರನ್ನು ಎಬ್ಬಿಸಿ ಹೊರಬರುವಷ್ಟರಲ್ಲಿ ಮಣ್ಣಿನ ಗೋಡೆಯ ಮನೆ ನೆಲಕಚ್ಚಿದೆ. ಕೂದಲೆಳೆಯ ಅಂತರದಲ್ಲಿ ಬರೋಬ್ಬರಿ 7 ಜನರು ಬದುಕಿ ಕೊಂಡಿದ್ದಾರೆ.
ನಂಜನಗೂಡು ತಾಲ್ಲೂಕಿನ ದೇವಿರಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಅನಾದಿ ಕಾಲದ ಮಣ್ಣಿನ ಗೋಡೆಯ ಮನೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಶಿಥಿಲಗೊಂಡು ನೆಲ ಕಚ್ಚಿದೆ. ಹೊಸಹಳ್ಳಿ ಗ್ರಾಮದ ಮಲ್ಲಿಗಮ್ಮ ಎಂಬುವರಿಗೆ ಸೇರಿದ ವಾಸದ ಮನೆ ಇದಾಗಿದ್ದು, ಮನೆ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದ ದವಸ ಧಾನ್ಯಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಯಾಗಿದೆ. ಕಳೆದ ಬಾರಿಯೂ ಮನೆ ಗೋಡೆ ಕುಸಿದು ಬಿದ್ದಿತ್ತು.
ಸ್ಥಳಕ್ಕೆ ಬಂದ ಗ್ರಾಮ ಲೆಕ್ಕಾಧಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ. ಮತ್ತೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಂಪೂರ್ಣವಾಗಿ ಮನೆ ಕುಸಿದು ಬಿದ್ದಿದೆ. ಕಳೆದ ವರ್ಷ ಪರಿಹಾರ ನೀಡುತ್ತೇವೆ ಎಂದು ಭಾವಚಿತ್ರ ತೆಗೆದುಕೊಂಡು ಹೋದ ಕಂದಾಯ ಅಧಿಕಾರಿಗಳು ಇತ್ತ ಪರಿಹಾರವೂ ಇಲ್ಲ. ವಾಸದ ಮನೆಯ ಸೌಲಭ್ಯವನ್ನು ಕೂಡ ನೀಡಿಲ್ಲ. ಏನಾದ್ರೂ ಜೀವ ಹಾನಿ ಆಗಿದ್ದರೆ ಯಾರು ಹೊಣೆ ಎಂದು ಹೊಸಹಳ್ಳಿ ಗ್ರಾಮಸ್ಥರು ಮತ್ತು ಮನೆ ಕಳೆದುಕೊಂಡ ಕುಟುಂಬಸ್ಥರು ಕಂದಾಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಶಾಸಕರು ಮತ್ತು ತಾಲ್ಲೂಕು ಆಡಳಿತ ಎಚ್ಚೆತ್ತು ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಬಡ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ಆಸರೆಯಾಗಬೇಕಿದೆ.
ಸಿಎಂ ಸುಗಂಧರಾಜು ಪಬ್ಲಿಕ್ ನೆಕ್ಸ್ಟ್ ನಂಜನಗೂಡು.
PublicNext
13/10/2024 01:10 pm