ಮೈಸೂರು: ಆ ಕ್ಷೇತ್ರದಲ್ಲಿ ಅಪ್ಪ ಮಿನಿಸ್ಟರ್, ಮಗ ಎಂಪಿಯಾದರೂ ಅಲ್ಲಿನ ನಿವಾಸಿಗಳಿಗೆ ಸ್ಮಶಾನಕ್ಕೆ ರಸ್ತೆ ಇಲ್ಲದೆ ಪರದಾಡುತ್ತಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಮುಖ್ಯಮಂತ್ರಿಗಳ ತವರು ಜಿಲ್ಲೆ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಹಾಗೂ ಸಂಸದ ಸುನೀಲ್ ಬೋಸ್ ರವರು ಪ್ರತಿನಿಧಿಸುವ ಕ್ಷೇತ್ರದ ತಿ. ನರಸೀಪುರ ತಾಲ್ಲೂಕಿನ ಬನ್ನೂರು ಪಟ್ಟಣದಲ್ಲಿ ಸತ್ತ ವ್ಯಕ್ತಿಯ ಶವ ಸಾಗಿಸಲು ಸ್ಮಶಾನಕ್ಕೆ ರಸ್ತೆ ವ್ಯವಸ್ಥೆ ಇಲ್ಲವೆಂದು ಗ್ರಾಮಸ್ಥರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದಾರೆ.
ತಾಲ್ಲೂಕು ಮತ್ತು ಜಿಲ್ಲಾ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಈ ರೀತಿ ಆದರೆ ಇನ್ನುಳಿದ ಕ್ಷೇತ್ರಗಳ ಪರಿಸ್ಥಿತಿ ಏನು ಎಂದು ಕಿಡಿಕಾರಿದ್ದಾರೆ.
ಬನ್ನೂರು ಪಟ್ಟಣದ ಕಾವೇರಿ ಸರ್ಕಲ್ ನಲ್ಲಿ ಶವದೊಂದಿಗೆ ಜಮಾಯಿಸಿದ ಬನ್ನೂರು ಪಟ್ಟಣದ ನಿವಾಸಿಗಳು ಶವ ಇಟ್ಟು ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಶವ ಸಂಸ್ಕಾರಕ್ಕೆ ಮುಂದಾಗಿದ್ದು, ಪ್ರತಿಭಟನೆಯ ಪರಿಣಾಮ ಮೈಸೂರು ಮತ್ತು ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು, ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತು ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಹಾಗೂ ಅಪ್ಪ ಮಗ ಪ್ರತಿನಿಧಿಸುವ ಕ್ಷೇತ್ರದಲ್ಲಿ ಸ್ಮಶಾನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಕೂಡಲೇ ಸ್ಮಶಾನಕ್ಕೆ ಹೋಗುವ ರಸ್ತೆಯನ್ನು ಸರಿಪಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಸಿಎಂ ಸುಗಂಧರಾಜು, ಪಬ್ಲಿಕ್ ನೆಕ್ಸ್ಟ್, ಮೈಸೂರು
PublicNext
16/10/2024 05:14 pm