ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿನ ಅಕ್ರಮ ಒತ್ತುವರಿ ತೆರವು ಭೂತಕ್ಕೆ ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದೆ.
ಕಳೆದ ನಾಲ್ಕೈದು ದಿನಗಳ ಇನ್ನಷ್ಟೇ ಚಿಕ್ಕಮಗಳೂರು ತಾಲೂಕಿನ ರೈತ ಮಲ್ಲೇಶ್ ಎಂಬುವರು ವಿಷ ಸೇವಿಸಿ ಮೂರು ದಿನಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡಿ ಸಾವನ್ನಪ್ಪಿದ್ದರು. ಇಂದು ಮತ್ತೆ ಕೊಪ್ಪ ತಾಲೂಕಿನ ಮೇಗುಂದ ಹೋಬಳಿಯ ಮೇಗೂರಿನಲ್ಲಿ 53 ವರ್ಷದ ರೈತ, ಮನೆ ಮುಂದಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಕರುಣಾಕರ್ ಅವರು ಬದುಕಿಗಾಗಿ ಹತ್ರತ್ರ ಅರ್ಧ ಎಕರೆಯಷ್ಟು ಒತ್ತುವರಿ ಮಾಡಿಕೊಂಡಿದ್ದರು. ಜೊತೆಗೆ ಸ್ಥಳೀಯ ಸೊಸೈಟಿ, ಬ್ಯಾಂಕ್ ಹಾಗೂ ಒಂದಷ್ಟು ಕೈ ಸಾಲ ಕೂಡ ಮಾಡಿಕೊಂಡಿದ್ದರು. ಮಗಳ ಮದುವೆ ಸಹ ಮಾಡಬೇಕಾಗಿದ್ದು, ಬದುಕಿಗಾಗಿ ಜಮೀನಿನ ಆದಾಯದ ಮೇಲೆ ಇಡೀ ಕುಟುಂಬ ಸಂಪೂರ್ಣ ಅವಲಂಬಿತವಾಗಿದ್ದರು. ಆದರೆ, ಕಳೆದೊಂದು ತಿಂಗಳಿನಿಂದ ಒತ್ತುವರಿ ತೆರವು ವಿಷಯದ ಸುದ್ದಿ ಕೇಳಿ ಚಿಂತಾಕ್ರಾಂತರಾಗಿದ್ದರು.
ಸದ್ಯದಲ್ಲೇ ಒತ್ತುವರಿ ತೆರವು ಮಾಡೇ ಮಾಡುತ್ತಾರೆ. ಮಗಳ ಮದುವೆ ಆಗಿಲ್ಲ. ಸಾಲ ತೀರಿಸಲು ಬೇರೆ ದಾರಿ ಇಲ್ಲಾ ಎಂದೆಲ್ಲಾ ಕುಟುಂಬಸ್ಥರು ಹಾಗೂ ಸ್ಥಳೀಯರ ಬಳಿ ನೋವು ತೋಡಿಕೊಂಡಿದ್ದರು. ದಿನೇ ದಿನೇ ಸಾಲ ಹಾಗೂ ಒತ್ತುವರಿ ಆತಂಕದಿಂದ ಕಂಗಾಲಾಗಿದ್ದ ಕರುಣಾಕರ್ ಮನೆಯ ಹತ್ತಿರದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
PublicNext
08/10/2024 09:24 pm