ಚಿಕ್ಕಮಗಳೂರು: ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಈ ಜಗತ್ತು ಇರುವುದು ಕೇವಲ ಮನುಷ್ಯರಿಗಾಗಿ ಅಲ್ಲ, ಸಕಲ ಪ್ರಾಣಿ ಪಕ್ಷಿ, ಕ್ರಿಮಿಕೀಟಗಳಿಗೂ ಜಾಗ ಇದೆ. ಇವು ಕೂಡ ಬದುಕಬೇಕು. ಹಾಗಾಗಿ ಅದಕ್ಕೆ ಬೇಕಾದ ಆಹಾರ ಎಲ್ಲಾ ಸಮಯದಲ್ಲಿ ಸಿಗುವ ಹಾಗೆ ಮಾಡಬೇಕು. ಅದಕ್ಕೆ ವಿವಿಧ ರೀತಿಯ ಹಣ್ಣಿನ ಗಿಡಗಳಾದ ಅತ್ತಿಮರ, ಗೋಣಿ ಮರ ಹಾಗೂ ಇನ್ನಿತರ ಹಣ್ಣಿನ ಮರಗಳನ್ನು ನೆಡುವುದರಿಂದ ಪ್ರಾಣಿ, ಪಕ್ಷಿಗಳಿಗೆ ಆಹಾರ ಸಿಗುತ್ತದೆ. ಆದ್ದರಿಂದ ಅತಿ ಹೆಚ್ಚು ಹಣ್ಣಿನ ಮರಗಳನ್ನು ಬೆಳೆಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕಡೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವಾಗ ದೊಡ್ಡ ದೊಡ್ಡ ಹಳೆಯ ಮರಗಳನ್ನು ಕಡಿದು ಅಗಲೀಕರಣ ಮಾಡಲಾಯಿತು. ಆ ಮರ ಕಡಿದಾಗ ಉಂಟಾದ ನಷ್ಟಕ್ಕೆ ಹೆದ್ದಾರಿ ಪ್ರಾಧಿಕಾರದವರು ಹಣ ಬಿಡುಗಡೆ ಮಾಡಿದ್ರು. ಆದರೆ, ಯಾಕೆ ಗಿಡ- ಮರಗಳನ್ನು ಬೆಳೆಸಿಲ್ಲ? ಎಂದು ಪ್ರಶ್ನಿಸಿದರು. ಸಭೆಯಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ, ಶಾಸಕಿ ನಯನಾ ಮೋಟಮ್ಮ, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಸಿಇಒ ಕೀರ್ತನಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
PublicNext
16/10/2024 07:02 pm