ಪುಣೆ: ಕೆಲಸದ ಒತ್ತಡದಿಂದ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದು, ಆಕೆಯ ಅಂತ್ಯಕ್ರಿಯೆಗೆ ಆ ಸಂಸ್ಥೆಯಿಂದ ಯಾರೊಬ್ಬರು ಕೂಡ ಬಾರದೇ ಇರುವ ಕುರಿತು ತಾಯಿಯೊಬ್ಬರು ಬರೆದಿರುವ ಭಾವುಕ ಪತ್ರವೊಂದು ವೈರಲ್ ಆಗುತ್ತಿದೆ. ಸಂಸ್ಥೆ ನೀಡಿದ ಅತಿಯಾದ ಕೆಲಸದ ಒತ್ತಡದಿಂದಾಗಿ ಮಗಳು ಮೃತಪಟ್ಟಿದ್ದಾರೆ ಎಂದು ತಾಯಿಯೊಬ್ಬರು ಆರೋಪಿಸಿ, ಕಂಪನಿಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.
ಅನ್ನಾ ಸಬಸ್ಟೆಯನ್ ಪೆರಾಯಿಲ್ (26) ಮೃತ ಉದ್ಯೋಗಿಯಾಗಿದ್ದು, ಇವರು ಪುಣೆಯ ಬಹುರಾಷ್ಟ್ರೀಯ ಕಂಪನಿ Ernst & Young (EY)ಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ನಾಲ್ಕು ತಿಂಗಳ ಹಿಂದಷ್ಟೇ ಉದ್ಯೋಗಕ್ಕೆ ಸೇರಿದ್ದರು. ಆದರೆ ಅತಿಯಾದ ಕೆಲಸದ ಒತ್ತಡದಿಂದಾಗಿ ಆಕೆ ಮೃತಪ್ಟಿದ್ದಾಳೆ ಎಂದು ತಾಯಿ ಅಳಲು ತೋಡಿಕೊಂಡಿದ್ದಾರೆ.
ಕಂಪನಿಯ ಮುಖ್ಯಸ್ಥ ರಾಜೀವ್ ಮೆಮಾನಿ ಅವರಿಗೆ ಮಗಳ ಸಾವಿನ ಕುರಿತು ಪತ್ರ ಬರೆದಿರುವ ತಾಯಿ ಅನಿತಾ ಅಗಸ್ಟೀಸ್, ‘ತಮ್ಮ ಮಗಳು ಮೊದಲ ಕೆಲಸ ಎಂದು ಉತ್ಸಾಹದಲ್ಲಿಯೇ ಕಂಪನಿಗೆ ಸೇರಿದ್ದಳು. ಆದರೆ ನಾಲ್ಕು ತಿಂಗಳಲ್ಲಿ ಅತಿಯಾದ ಕೆಲಸದ ಹೊರೆ ತಡೆಯಲಾರದೆ ಮೃತಪಟ್ಟಿದ್ದಾಳೆ. ಪಿಜಿಯಿಂದ ಮನೆಗೆ ಬಂದಾಗಲೆಲ್ಲಾ ಅತಿಯಾದ ಸುಸ್ತಿನಿಂದ ಬಳಲುತ್ತಿದ್ದಳು.
ದಿನಕಳೆದಂತೆ ಆಕೆ ಆತಂಕ, ಒತ್ತಡ, ನಿದ್ರಾಹೀನತೆಗೆ ಒಳಗಾಗಿದ್ದಳು. ಆದರೂ ಕೆಲಸದಲ್ಲಿ ಯಶಸ್ಸು ಕಾಣಬೇಕೆಂದು ಒತ್ತಡವನ್ನು ಸಹಿಸಿ ಕೆಲಸ ಮಾಡುತ್ತಿದ್ದಳು. ಆಕೆಯ ವ್ಯವಸ್ಥಾಪಕರು ಕೂಡ ರಾತ್ರಿ ಕೆಲಸ ನೀಡಿ, ಬೆಳಗಿನೊಳಗೆ ಮುಗಿಸಬೇಕೆಂದು ಗಡುವು ನೀಡುತ್ತಿದ್ದರು. ಹೀಗಾಗಿ ಅನ್ನಾ, ರಾತ್ರಿ ಹಗಲೆನ್ನದೆ ವಾರಾಂತ್ಯದಲ್ಲೂ ಕೆಲಸ ಮಾಡುತ್ತಿದ್ದಳು. ಇದರಿಂದಾಗಿಯೇ ಆಕೆ ಮೃತಪಟ್ಟಿದ್ದಾಳೆ’ ಎಂದು ದೂರಿದ್ದಾರೆ ಎಂದು ವರದಿಯಾಗಿದೆ.
ಜೊತೆಗೆ, ಸಂಪೂರ್ಣ ಮಾಹಿತಿಯನ್ನು ಪತ್ರ ಮುಖೇನ ಕಂಪೆನಿಗೂ ಕಳುಹಿಸಿ, ಇತರ ಉದ್ಯೋಗಿಗಳ ಜೀವ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದು, ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅವರ ದುರಂತ ಸಾವಿನಿಂದ ತೀವ್ರ ದುಃಖವಾಗಿದೆ. ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತಾವರಣದ ಆರೋಪಗಳ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ಕಾರ್ಮಿಕ ಸಚಿವಾಲಯವು ದೂರನ್ನು ಅಧಿಕೃತವಾಗಿ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
PublicNext
20/09/2024 04:03 pm