ಧಾರವಾಡ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಗೆ ಪತ್ರ ಬರೆದಿದ್ದು, ಈ ಕುರಿತು ಶಾಸಕ ವಿನಯ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದಾರೆ.
ಚೆನ್ನಮ್ಮನ ಕಿತ್ತೂರಿನಲ್ಲಿ ಮಾತನಾಡಿದ ಅವರು, ಟೈಗರ್ ಕಾರಿಡಾರ್ ಎಂದು ಮಾಡಲಾಗಿದೆ. ಅಲ್ಲಿ ನಮ್ಮ ಕೆಲಸ ಅಂಡರ್ ಗ್ರೌಂಡ್ ನಡೆಯುತ್ತದೆ. ಆದರೆ, ಕೇಂದ್ರ ಸರ್ಕಾರ ವನ್ಯಜೀವಿ ಸಂರಕ್ಷಣೆ ವಿಚಾರ ಇಟ್ಟುಕೊಂಡು ಕ್ಲಿಯರೆನ್ಸ್ ಕೊಡುತ್ತಿಲ್ಲ. ಕ್ಲಿಯರೆನ್ಸ್ ಸಿಕ್ಕರೆ ಕೂಡಲೇ ಕಾಮಗಾರಿ ಆರಂಭಗೊಳ್ಳುತ್ತದೆ ಎಂದರು.
ಮುನಿರತ್ನ ಬಂಧನ ವಿಚಾರವಾಗಿ ಕಾಂಗ್ರೆಸ್ ಮೇಲೆ ಮುಗಿಬಿದ್ದಿರುವ ಬಿಜೆಪಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶಾಸಕ ವಿನಯ್, ಮುನಿರತ್ನ ಅವರು ಮಾತನಾಡಿದ್ದು ತಪ್ಪು. ದೊಡ್ಡ ಸಮುದಾಯದ ಬಗ್ಗೆ ಆ ರೀತಿ ಮಾತನಾಡಬಾರದಿತ್ತು. ಅದಕ್ಕೆ ಅವರ ಬಂಧನವಾಗಿದೆ ಎಂದರು.
ರಾಜಕೀಯ ಕ್ಷೇತ್ರಕ್ಕೆ ಕೆಲವರು ತಮ್ಮ ಲಾಭಕ್ಕಾಗಿ ಬರುತ್ತಿದ್ದಾರೆ ಎಂಬ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೇವಲ ರಾಜಕಾರಣಿಗಳು ಎನ್ನಬೇಡಿ. ರಾಜಕಾರಣದಲ್ಲಿ ಅವರು ಹೇಳಿದಂತೆ ಎಲ್ಲ ರೀತಿಯ ಜನ ಇದ್ದಾರೆ. ಎಲ್ಲಾ ಪಕ್ಷದಲ್ಲೂ ಸ್ವಹಿತಾಸಕ್ತಿಗಾಗಿ ಬರುವವರಿದ್ದಾರೆ. ಅಂತಹ ರಾಜಕಾರಣಿಗಳು ಬದಲಾಗಬೇಕು. ಅಂತವರನ್ನು ಇಟ್ಟುಕೊಂಡರೆ ಪಕ್ಷಗಳು ಹಾಳಾಗುತ್ತವೆ. ಅಭಿವೃದ್ಧಿ ಕುಂಠಿತವಾಗುತ್ತದೆ. ಅಭಿವೃದ್ಧಿ ಬಗ್ಗೆ ಕಳಕಳಿ ಇಲ್ಲದವರು ಎಲ್ಲ ಪಕ್ಷದಲ್ಲೂ ಇದ್ದಾರೆ. ಅಂತವರನ್ನು ಇಟ್ಟುಕೊಂಡರೆ ಪಕ್ಷಕ್ಕಷ್ಟೇ ಅಲ್ಲದೇ ರಾಜ್ಯಕ್ಕೂ ಹಿನ್ನಡೆಯಾಗುತ್ತದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/09/2024 04:59 pm