ಹುಬ್ಬಳ್ಳಿ: ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿನ ಸತ್ಯಹರಿಶ್ಚಂದ್ರ ಸ್ಮಶಾನ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಹಾಗೂ ಇನ್ನಿತರ ಕಾಮಗಾರಿಗಳನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸತ್ಯ ಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಹಾಗೂ ರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಹುಬ್ಬಳ್ಳಿ ನಗರದ ಮಂಟೂರ ರಸ್ತೆಯ ಸರ್ವೆ ನಂಬರ್ 212ರ ಸತ್ಯ ಹರಿಶ್ಚಂದ್ರ ಸ್ಮಶಾನ ಭೂಮಿಯಲ್ಲಿ ಕಳೆದ ನೂರಾರು ವರ್ಷಗಳಿಂದ 30ಕ್ಕೂ ಹೆಚ್ಚು ಬಡಾವಣೆಗಳ ಜನರು ಮೃತರ ಅಂತ್ಯಸಂಸ್ಕಾರ ನೆರವೇರಿಸಲು ಉಪಯೋಗಿಸುತ್ತಾ ಬಂದಿರುತ್ತಾರೆ. ಈ ಪ್ರದೇಶದಲ್ಲಿ ಶೇಕಡಾ 89 ದಲಿತ ಸಮುದಾಯ, ಹಾಗೂ ಹಿಂದುಳಿದ ಸಮುದಾಯದವರು ವಾಸವಿದ್ದಾರೆ. ಪರಿಶಿಷ್ಟರು ಜೀವಂತವಿದ್ದಾಗಲೂ ಶೋಷಣೆ ದಬ್ಬಾಳಿಕೆಗೆ ಒಳಗಾಗುತ್ತಾರೆ. ಮೃತಮಟ್ಟ ನಂತರವಾದರೂ ಅವರ ಆತ್ಮಕ್ಕೆ ಶಾಂತಿ ಸಿಗಲ್ಲೊಂದು ರುದ್ರಭೂಮಿಯಲ್ಲಿ ವಿಧಿವಿಧಾನ ಅನ್ವಯ ಅಂತ್ಯ ಸಂಸ್ಕಾರ ನೆರವೇರಿಸುತ್ತೇವೆ. ಇಂತಹ ಪವಿತ್ರ ನೆಲದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಹೀನ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
2019ರಲ್ಲಿ ಸ್ಮಶಾನ ಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಿಸುವ ಹುನ್ನಾರವನ್ನು ನಾವೆಲ್ಲರೂ ಒಗ್ಗಟ್ಟಿನಿಂದ ವಿಫಲಗೊಳಿಸಿದ್ದೇವೆ. ಆದರೆ, 2022ರಲ್ಲಿ ಸ್ಮಶಾನ ಭೂಮಿ ಕಾಂಪೌಂಡ್ ಗೋಡೆಯನ್ನು ಒಡೆದು ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು 100 ಫೂಟ್ ಜಾಗೆಯ ರಸ್ತೆಯನ್ನು ಕಾನೂನು ಬಾಹಿರವಾಗಿ ನಿರ್ಮಿಸಿದ್ದಾರೆ. ಅಲ್ಲದೆ ಎಸ್ಸಿಪಿ/ಟಿಎಸ್ಪಿ ಅನುದಾನ ದುರ್ಬಳಕೆ ಮಾಡಿಕೊಂಡು ನಮ್ಮ ಪೂರ್ವಜರ ಸಮಾಧಿಗಳ ಮೇಲೆ ರಸ್ತೆ ನಿರ್ಮಿಸಿದ್ದಾರೆ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
Kshetra Samachara
19/09/2024 04:40 pm