ಧಾರವಾಡ: ಪ್ರಸ್ತುತ ದಿನದಲ್ಲಿ ಭ್ರಷ್ಟಾಚಾರ ಸಾಕಷ್ಟು ನಡೆಯುತ್ತಿದೆ. ಆ ಪಕ್ಷ, ಈ ಪಕ್ಷ ಅಂತಲ್ಲ ಎಲ್ಲ ಪಕ್ಷಗಳಿಂದಲೂ ಭ್ರಷ್ಟಾಚಾರ ನಡೆಯುತ್ತಿದೆ. ಇದರಿಂದ ಮಧ್ಯಮ ವರ್ಗ ಹಾಗೂ ಕೆಳ ವರ್ಗದವರು ಸಾಕಷ್ಟು ಸಂಕಷ್ಟಕ್ಕೀಡಾಗುತ್ತಾರೆ. ಭ್ರಷ್ಟಾಚಾರ ಹೀಗೇ ನಡೆದರೆ ದೊಡ್ಡ ಕ್ರಾಂತಿ ಆಗಬಹುದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಸಾಕಷ್ಟು ಘಟನೆಗಳು ಈಗ ಹೊರಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಯಬೇಕು. ಇದೇ ರೀತಿ ಭ್ರಷ್ಟಾಚಾರ ನಡೆದರೆ ನಮ್ಮ ಆರ್ಥಿಕ ಪರಿಸ್ಥಿತಿ ಏನಾಗಬಹುದು? ಇದೊಂದು ಆತಂಕಕಾರಿ ವಿಚಾರ ಇದರಿಂದ ಮಧ್ಯಮ ವರ್ಗ ಹಾಗೂ ಕೆಳವರ್ಗದವರು ಸಂಕಷ್ಟಕ್ಕೀಡಾಗುತ್ತಾರೆ. ಶ್ರೀಮಂತರಲ್ಲಿ ಹಣ ಇದ್ದೇ ಇರುತ್ತದೆ. ಇದರಿಂದ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂಬುದು ನನ್ನ ವಿಚಾರ ಎಂದರು.
ಭ್ರಷ್ಟಾಚಾರದಿಂದ ಕ್ರಾಂತಿ ಆಗುವುದು ಬೇಡ. ಅದನ್ನು ತಡೆಗಟ್ಟುವ ಕೆಲಸ ನಡೆಯಬೇಕು. ಇಂದು ಸಾರ್ವಜನಿಕ ಹಿತಾಸಕ್ತಿಯ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಕೇವಲ ತಮ್ಮ ತಮ್ಮ ಅಭಿವೃದ್ಧಿಗಳನ್ನು ಮಾತ್ರ ಮಾಡಿಕೊಳ್ಳುತ್ತಿದ್ದಾರೆ. ಹಿಂದೆ ಇದ್ದ ಸರ್ಕಾರವನ್ನು ಈಗಿರುವ ಸರ್ಕಾರ ಶೇ.40 ಸರ್ಕಾರ ಎಂದು ಕರೆಯುತ್ತಿತ್ತು. ಈಗಿನ ಸರ್ಕಾರ ವಾಲ್ಮೀಕಿ ನಿಗಮದ ಹಗರಣದಲ್ಲಿ ತೊಡಗಿದೆ. ಭ್ರಷ್ಟಾಚಾರ ಎಂಬುದು ಒಂದೇ ಪಕ್ಷಕ್ಕೆ ಸೀಮಿತವಲ್ಲ. ರಾಜಕೀಯಕ್ಕೆ ಈಗ ಬರುತ್ತಿರುವವರು ಶ್ರೀಮಂತರಾಗುವುದಕ್ಕೆ ಎಂದು ನಾನು ತಿಳಿದುಕೊಂಡಿದ್ದೇನೆ ಎಂದರು.
ಮುನಿರತ್ನ ಹಾಗೂ ದರ್ಶನ್ ಬಂಧನ ವಿಚಾರವಾಗಿ ಮಾತನಾಡಿದ ಅವರು, ಯಾರು ಈ ಸಮಾಜಕ್ಕೆ ಆದರ್ಶಪ್ರಿಯರಾಗಬೇಕಿತ್ತೋ ಅವರೇ ಈಗ ಜೈಲಿನಲ್ಲಿದ್ದಾರೆ. ಯಾವ ಮಟ್ಟಕ್ಕೆ ಹೋದರೂ ದುರಾಸೆ ಕಡಿಮೆಯಾಗುವುದಿಲ್ಲ ಎಂಬುದನ್ನು ಇದು ತೋರಿಸಿಕೊಡುತ್ತದೆ. ಸಮಾಜದಲ್ಲಿ ದೊಡ್ಡ ಬದಲಾವಣೆ ಬರಬೇಕಿದೆ. ಆ ಬದಲಾವಣೆ ಮುಂದಿನ ಪೀಳಿಗೆಗೆ ಶಾಂತಿ, ಸೌಹಾರ್ದತೆಯನ್ನು ಬೆಳೆಸಿಕೊಡಬೇಕಿದೆ. ರಾಜಕೀಯಕ್ಕೆ ಬರುವುದಿದ್ದರೆ ಸೇವೆಗಾಗಿ ಬರಬೇಕು. ತಮ್ಮ ಲಾಭಕ್ಕಾಗಿ ಅಲ್ಲ. ರಾಜಕೀಯ ಎನ್ನುವುದು ವ್ಯಕ್ತಿಯಲ್ಲ. ದೇಶ ಸೇವೆ ಮಾಡಿ ರಾಜಕೀಯಕ್ಕೆ ಬಂದವರನ್ನು ನಾವು ನೋಡಿದ್ದೇವೆ. ಅವರು ತಮ್ಮ ಲಾಭಕ್ಕಾಗಿ ರಾಜಕೀಯ ಮಾಡಿರಲಿಲ್ಲ. ಈಗ ರಾಜಕೀಯಕ್ಕೆ ಬರುವವರು ತಮ್ಮ ಲಾಭಕ್ಕಾಗಿ ಮಾತ್ರ ಬರುತ್ತಿದ್ದಾರೆ. ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ ಆದರೆ, ಆಗು ಹೋಗುಗಳು ಬೇರೆಯೇ ಇರುತ್ತವೆ ಎಂದರು.
Kshetra Samachara
19/09/2024 12:47 pm