ಬೆಂಗಳೂರು: ಜಮೀನು ವ್ಯಾಜ್ಯ ಸಂಬಂಧ ಕೋಣನಕುಂಟೆ ಠಾಣೆ ಇನ್ ಸ್ಪೆಕ್ಟರ್, ವ್ಯಕ್ತಿಯೊಬ್ಬರ ಹಲ್ಲೆ ನಡೆಸಿ ಸಾವಿಗೆ ಕಾರಣರಾಗಿರುವ ಆರೋಪ ಕೇಳಿಬಂದಿದೆ.
ಇನ್ ಸ್ಪೆಕ್ಟರ್ ಪಾಪಣ್ಣ ವಿರುದ್ಧ ಮೃತ ರಾಮಸ್ವಾಮಿ ಅವರ ಪತ್ನಿ ಮುನಿಯಮ್ಮ ಎಂಬುವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ. ಇನ್ ಸ್ಪೆಕ್ಟರ್ ಪಾಪಣ್ಣ ನಮ್ಮ ಜಮೀನು ಬಳಿ ಬಂದು ಹಲ್ಲೆ ಮಾಡಿದ ಪರಿಣಾಮ ಸೆ.13ರಂದು ಮೃತರಾಗಿದ್ದು, ಪೊಲೀಸರ ವಿರುದ್ಧ ಕ್ರಮ ಕೈಗೊಂಡು ಪಾರದರ್ಶಕ ತನಿಖೆ ನಡೆಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಕೊತ್ತನೂರಿನಲ್ಲಿ ವಾಸವಾಗಿರುವ ಮುನಿಯಮ್ಮ, ಕೊತ್ತನೂರಿನ ಗ್ರಾಮದ ಸರ್ವೇ ನಂಬರ್ 156ರಲ್ಲಿನ 1.31 ಎಕರೆ ಜಮೀನಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಮೃತ ರಾಮಸ್ವಾಮಿ ಹಾಗೂ ನಿರ್ಮಿತಿ ಕೇಂದ್ರದ ನಡುವೆ ವ್ಯಾಜ್ಯ ಏರ್ಪಟ್ಟಿತ್ತು.
ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಎರಡು ತಿಂಗಳ ಹಿಂದೆ ತಮ್ಮ ಜಮೀನು ಬಳಿ ಬಂದ ಪೊಲೀಸರು ಪತಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ತನಗೆ ಹಾಗೂ ಮಗಳ ಮೇಲೆ ಕೂಡ ಕೈ ಮಾಡಿದ್ದಾರೆ. ಹಲ್ಲೆ ವಿಷಯದಲ್ಲಿ ನ್ಯಾಯಾಲಯದಲ್ಲಿ ತಿಳಿಸಿದರೆ ಶಾಶ್ವತವಾಗಿ ಜೈಲಿಗೆ ಹಾಕುವೆ ಎಂದು ಬೆದರಿಸಿದ್ದರು ಎಂದು ದೂರಿನಲ್ಲಿ ಮಹಿಳೆ ವಿವರಿಸಿದ್ದಾರೆ.
ಪೊಲೀಸರ ಹಲ್ಲೆಯ ಹಿಂದೆ ನಗರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ದಕ್ಷಿಣ ವಿಭಾಗದ ತಹಶೀಲ್ದಾರ್ ಸೇರಿದಂತೆ ಸ್ಥಳೀಯ ಪ್ರಭಾವಿಗಳ ಕೈವಾಡವಿದೆ. ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ಬಳಿಕ ಪೊಲೀಸರೇ ಖಾಸಗಿ ಆಸ್ಪತ್ರೆ ಸೇರಿಸಿದ್ದು ಸೆ.13ರಂದು ತನ್ನ ಪತಿ ರಾಮಸ್ವಾಮಿ ಸಾವನ್ನಪ್ಪಿರುವುದಾಗಿ ದೂರಿದ್ದಾರೆ.
ತನ್ನ ಪತಿಯ ಸಾವಿಗೆ ಕಾರಣರಾದ ಇನ್ ಸ್ಪೆಕ್ಟರ್ ಒಳಗೊಂಡಂತೆ ಸಂಬಂಧಿತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಜಾತಿ ನಿಂದನೆಯಡಿ ಪ್ರಕರಣ ದಾಖಲಿಸಿಕೊಂಡು ಮೇಲಧಿಕಾರಿಗಳು ಪಾರದರ್ಶಕ ತನಿಖೆ ನಡೆಸಬೇಕೆಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
PublicNext
16/09/2024 08:51 pm