ಮಂಗಳೂರು: ನಗರದ ಮಣ್ಣಗುಡ್ಡ ವೇರ್ಹೌಸ್ ಬಳಿಯ ಅಪಾರ್ಟ್ಮೆಂಟ್ ಒಂದರ ನೀರಿನ ಟ್ಯಾಂಕ್ನೊಳಗೆ ಮರದ ಬೇರು ನುಸುಳಿದೆ ಎಂದು ಮನಪಾ ರಸ್ತೆಬದಿಯ ಬೃಹತ್ ಗಾತ್ರದ ಮರವನ್ನು ಕಡಿಯಲು ಮುಂದಾಗಿದ್ದು, ಪರಿಸರ ಪ್ರೇಮಿಗಳು ಮಧ್ಯಪ್ರವೇಶಿಸಿ ಮರ ತೆರವು ಕಾರ್ಯವನ್ನು ತಡೆದಿದ್ದಾರೆ.
ಮಣ್ಣಗುಡ್ಡದ ವೇರ್ಹೌಸ್ ಬಳಿಯ ರಸ್ತೆಬದಿ ಬೆಳೆದ ಬೃಹತ್ ಗಾತ್ರದ ದೇವದಾರು ಮರದಿಂದ ಹತ್ತಿರದ ಕಟ್ಟಡಕ್ಕೆ ತೊಂದರೆ ಹಾಗೂ ಅದರಲ್ಲಿ ವಾಸಿಸುವರಿಗೆ ಪ್ರಾಣಾಪಾಯವಿದೆ ಎಂದು ಮರ ತೆರವಿಗೆ ಜುಲೈ 19ರಂದು ಅಂದಿನ ಅರಣ್ಯ ಅಧಿಕಾರಿ ಆದೇಶಿಸಿದ್ದರು. ಅದರಂತೆ ಮನಪಾ ನಿನ್ನೆ ಮರ ಕಡಿಯಲು ಮುಂದಾಗಿತ್ತು. ಒಂದಷ್ಟು ಗೆಲ್ಲುಗಳನ್ನು ಕಡಿದು ಹಾಕಲಾಗಿತ್ತು. ಈ ವಿಚಾರ ಪರಿಸರ ಪ್ರೇಮಿಗಳಾದ ಶಶಿಧರ್ ಶೆಟ್ಟಿ ಹಾಗೂ ಭುವನ್ ದೇವಾಡಿಗರಿಗೆ ತಿಳಿದು ತಕ್ಷಣ ಅವರಿಬ್ಬರೂ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲದೆ ಮರಕಡಿಯಲು ಅಡ್ಡಿಪಡಿಸಿ ಮರ ತೆರವು ಆದೇಶ ಹಿಂದೆಗೆಯುವಂತೆ ಅರಣ್ಯ ಅಧಿಕಾರಿಯನ್ನು ಒತ್ತಾಯಿಸಿದ್ದಾರೆ. ಅದರಂತೆ ಸದ್ಯ ಮರ ಕಡಿಯುವುದನ್ನು ಸ್ಥಗಿತಗೊಳಿಸಲಾಗಿದೆ.
ರಸ್ತೆ ಕಾಮಗಾರಿ, ಹೆದ್ದಾರಿ ಅಭಿವೃದ್ಧಿಗೆ ಮರಗಳು ಬಲಿಯಾಗಿ ಮಂಗಳೂರು ನಗರದಲ್ಲಿ ಮರಗಳ ಸಂಖ್ಯೆ ಶೇ 6ರಷ್ಟಕ್ಕೆ ಕುಸಿದಿದೆ. ಅದರ ನಡುವೆ ಈ ರೀತಿ ಮರಗಳ ಬುಡಗಳಿಗೆ ಈ ರೀತಿ ಕೊಡಲಿ ಏಟು ಕೊಟ್ಟರೆ ಹೇಗೆ ಎಂಬುದು ಪರಿಸರ ಪ್ರೇಮಿಗಳ ಪ್ರಶ್ನೆ.
Kshetra Samachara
11/09/2024 05:39 pm