ಮಂಗಳೂರು: ಬಿದಿರನ್ನೂ ಸಾಮಾನ್ಯ ಎಂದು ಅಲ್ಲಗಳೆಯುವಂತಿಲ್ಲ. ಮುಂದಿನ ದಿನಗಳಲ್ಲಿ ಬಿದಿರು ದೇಶದ ಆಸ್ತಿಯಾಗುವುದರಲ್ಲಿ ಯಾವ ಸಂಶಯವೇ ಇಲ್ಲ ಎಂದು ಪರಿಸರ ತಜ್ಞರು ಘಂಟಾಘೋಷವಾಗಿ ಹೇಳುತ್ತಿದ್ದಾರೆ.
ಹೌದು ಸೆ.18ನ್ನು ನಾವು ಅಂತಾರಾಷ್ಟ್ರೀಯ ಬಿದಿರು ದಿನವನ್ನಾಗಿ ಆಚರಿಸುತ್ತೇವೆ. ನೂರಾರು ವೈವಿಧ್ಯಮಯ ತಳಿಗಳನ್ನು ಹೊಂದಿರುವ ಬಿದಿರು ವಾರ್ಷಿಕವಾಗಿ 300ಕೆಜಿ ಆಮ್ಲಜನಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ಇದು ಒಬ್ಬ ಮನುಷ್ಯ ವಾರ್ಷಿಕವಾಗಿ ಬಳಸುವ ಆಮ್ಲಜನಕದ ಪ್ರಮಾಣ. ಅಲ್ಲದೆ ಬಿದಿರು ವಾತಾವರಣದ ಕಾರ್ಬನ್ ಡೈ ಆಕ್ಸೈಡ್ ಹೀರುವುದರಿಂದ ಪರಿಸರದಲ್ಲಿ ಸಮತೋಲನ ಕಾಪಾಡಲು ಅನುಕೂಲಕರ. ಅಲ್ಲದೆ ಮಣ್ಣು ಸವಕಳಿಯಾಗುವುದನ್ನು ತಡೆಗಟ್ಟಿ ಭೂಕುಸಿತವಾಗದಂತೆ ರಕ್ಷಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಅಂತರ್ಜಲ ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
ಭಾರತ ವರ್ಷಕ್ಕೆ 9ಸಾವಿರ ಕೋಟಿಯ ಬಿದಿರನ್ನು ರಫ್ತು ಮಾಡುತ್ತಿದೆ. ಸದ್ಯ ದೇಶದ ಆರ್ಥಿಕತೆಗೂ ಪ್ರಬಲವಾದ ಸರಕಾಗಿ ಬಿದಿರು ಕೆಲಸ ಮಾಡುತ್ತಿದೆ. ದೇಶದಲ್ಲಿ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಬಿದಿರು, ಬಿದಿರಿನಿಂದ ಮಾಡಿರುವ ಪರಿಕರಗಳನ್ನು ಬಳಸುವ ಕಾರ್ಯ ಆರಂಭವಾಗಿದೆ. ಬಿದಿರಿನಿಂದ ಇಂಧನ ಮಾಡುವ ಪ್ರಯೋಗ ಯಶಸ್ವಿಯಾಗಿದೆ. ಅಗರಬತ್ತಿ ಕಂಪೆನಿಗಳು ಬಿದಿರನ್ನು ಬಳಸುತ್ತಿದೆ. ರಾಜ್ಯದ ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾ ಹಾಗೂ ನ್ಯಾಷನಲ್ ಬ್ಯಾಂಬೂ ಮಿಷನ್ ಎಂಬ ಕೇಂದ್ರ ಸರಕಾರದ ಸಂಸ್ಥೆಗಳು ದೇಶದಲ್ಲಿ ಬಿದಿರು ಹೆಚ್ಚುಹೆಚ್ಚು ಬೆಳೆಸಲು ಪ್ರೋತ್ಸಾಹಿಸುತ್ತಿದೆ.
ದ.ಕ.ಜಿಲ್ಲೆಯಲ್ಲಿ ವನ ಚ್ಯಾರಿಟೇಬಲ್ ಟ್ರಸ್ಟ್ನ ಜೀತ್ ಮಿಲನ್ ರೋಚ್ ಹಾಗೂ ಅವರ ತಂಡ ಕಾಂತಾವರದಲ್ಲಿ 68ವಿಧದ ಬಿದಿರುಗಳನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಳೂರು ಫಲ್ಗುಣಿ ನದಿದಂಡೆಯಲ್ಲಿ 1ಕಿ.ಮೀ. ಉದ್ದಕ್ಕೆ ನೆಟ್ಟಿರುವ ಬಿದಿರು ಚೆನ್ನಾಗಿ ಬೆಳೆದಿದೆ. ಅಲ್ಲದೆ ಬೈಕಂಪಾಡಿಯಲ್ಲಿ ಬಿದಿರು ವನ ನಿರ್ಮಾಣಕ್ಕೆ ಬಿದಿರು ನೆಡುವ ಕಾರ್ಯ ಮಾಡುತ್ತಿದ್ದಾರೆ. ಇನ್ನಾದರೂ ಬಿದಿರನ್ನು ಉಳಿಸುವ ಯತ್ನ ಮಾಡಬೇಕಿದೆ.
PublicNext
18/09/2024 05:50 pm