ಉಡುಪಿ: ಉಡುಪಿಯ ಪಣಿಯಾಡಿ ಎಂಬಲ್ಲಿ ಅಪರೂಪದ ಕಾಡು ಬೆಕ್ಕು ಕಾಣಿಸಿಕೊಂಡಿದೆ. ಸ್ಥಳೀಯ ನಿವಾಸಿ ವೆಂಕಟಕೃಷ್ಣ ಲಕ್ಷ್ಮೀನಾರಾಯಣ ಉಪಾಧ್ಯಾಯ ಎಂಬವರ ಮನೆಗೆ ಅಪರೂಪದ ಅತಿಥಿ ಬಂದು ಅಚ್ಚರಿ ಮೂಡಿಸಿತು. ಅಂಗಳದಲ್ಲಿ ಓಡಾಡುತ್ತಿದ್ದ ಬೆಕ್ಕು ಮನೆಯ ಸುತ್ತಮುತ್ತ ಹೋಗಿ ಮೂಲೆ ಮೂಲೆಯಲ್ಲಿ ಅವಿತು ಕುಳಿತುಕೊಳ್ಳುತ್ತಿತ್ತು.
ಈ ಮಾಹಿತಿಯನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ತಲುಪಿಸಲಾಯಿತು. ನಿತ್ಯಾನಂದ ಒಳಕಾಡು ಮತ್ತು ಅರಣ್ಯ ಇಲಾಖೆಯ ಗಸ್ತು ಪಾಲಕ ದೇವರಾಜ್ ಪಾಣ ಅವರು ಸ್ಥಳಕ್ಕೆ ಬಂದರು. ಬಾಕ್ಸ್ ಗೆ ಕಾಡಬೆಕ್ಕು ತುಂಬಿಸಲು ಒಳಕಾಡು ಮತ್ತು ಪಾಣ ಸಾಕಷ್ಟು ಪರಿಶ್ರಮ ಪಡಬೇಕಾಯಿತು. ಕಾಡುಬೆಕ್ಕಿನ ತಲೆಯ ಭಾಗಕ್ಕೆ ಗಾಯವಾಗಿದ್ದು, ನಾಯಿ , ಬೆಕ್ಕನ್ನು ಹಿಡಿಯಲು ಪ್ರಯತ್ನಪಟ್ಟಿರಬಹುದು ಎನ್ನಲಾಗಿದೆ.
ಗಾಯಗೊಂಡಿರುವ ಕಾಡು ಬೆಕ್ಕನ್ನು ಪಶುವೈದ್ಯ ಡಾ. ಸಂದೀಪ್ ಅವರ ಬಳಿ ಚಿಕಿತ್ಸೆ ಕೊಡಿಸಲಾಗಿದೆ. ಸಂಪೂರ್ಣ ಚೇತರಿಸಿಕೊಂಡ ನಂತರ ಕಾಡುಬೆಕ್ಕನ್ನು ಮಣಿಪಾಲದ ಟ್ರೀ ಪಾರ್ಕ್ಗೆ ಬಿಡುವುದಾಗಿ ದೇವರಾಜ ಪಾಣ ಮಾಹಿತಿ ಹೇಳಿದ್ದಾರೆ.
Kshetra Samachara
18/09/2024 02:09 pm