ಬಂಟ್ವಾಳ: ವಿಟ್ಲ ಬಳಿಯ ಪೆರುವಾಯಿ ವ್ಯವಸಾಯ ಸೇವಾ ಸಂಘದಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿದೆ. ಮಾಣಿಲ ಶಾಖೆಯ ವಿಸ್ತರಣಾ ಕಟ್ಟಡ ಅಭಯದ ಉದ್ಘಾಟನೆ ಬಳಿಕ ಸಂಘದ ಮಹಾಸಭೆಯಲ್ಲಿ ಭಾರೀ ವ್ಯವಹಾರದ ಆರೋಪ ಕೇಳಿ ಬಂದು, ಸಭೆಯು ಗೊಂದಲದ ಗೂಡಾಗಿದೆ.
ಲೆಕ್ಕಪತ್ರಗಳ ಮಂಡನೆ ನಡೆಯುತ್ತಿದಂತೆ ಕೆಲವು ಸದಸ್ಯರು ಅವ್ಯವಹಾರದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪೆರುವಾಯಿ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಗೀತಾನಂದ ಶೆಟ್ಟಿ ಜಿ ಗಲಿಬಿಲಿಗೊಂಡಿದ್ದಾರೆ. ಜಮಾ ಖರ್ಚಿನಲ್ಲಿ ಅನೇಕ ಡಬಲ್ ಎಂಟ್ರಿಗಳು, ಮಹಾಸಭೆಯಲ್ಲಿ ಅಮಾನತು ಮೂಲ ಮತ್ತು ಖರ್ಚುಗಳ ಬಗ್ಗೆ ಸರಿಯಾದ ದಾಖಲೆಗಳನ್ನು ಮಂಡಿಸಿಲ್ಲ. 2024-25ರ ಅಂದಾಜು ಬಜೆಟ್ನ ಒಟ್ಟು ವೆಚ್ಚಗಳಲ್ಲಿ ವ್ಯತ್ಯಾಸ, ಅಪೂರ್ಣವಾದ ಮಹಾಸಭೆ ವರದಿ ಇವೆಲ್ಲದರ ಬಗ್ಗೆ ಅಧ್ಯಕ್ಷರ ಮುಂದೆ ಸದಸ್ಯರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇದರೊಂದಿಗೆ ಮಹಾಸಭೆ ವರದಿಯಲ್ಲಿ ಅಜೆಂಡಾ, ಆಮಂತ್ರಣ, ಅಧ್ಯಕ್ಷ, ಕಾರ್ಯ ನಿರ್ವಹಣಾಧಿಕಾರಿಯ ಹೆಸರು ಇಲ್ಲದಿರುವುದರ ಬಗ್ಗೆ ಗಂಭೀರ ಆರೋಪಗಳನ್ನು ಮಾಡಲಾಗಿದೆ.
ಲೆಕ್ಕಪರಿಶೋಧಕರ ವರದಿಯ ಸಂಕ್ಷಿಪ್ತ ಮಾಹಿತಿ ವರದಿ ಪುಸ್ತಕದಲ್ಲಿ ದಾಖಲಾಗದಿರುವುದಕ್ಕೆ ಭಾರೀ ಆಕ್ಷೇಪ ಕೇಳಿಬಂದಿದೆ. ಉತ್ತರ ಕೊಡಲಾಗದ ಅಧ್ಯಕ್ಷರು ರಾಜಕೀಯ ಮಾತನಾಡಲಾರಂಭಿಸಿದ್ದಾರೆ. ಈ ಸಂದರ್ಭ ಸಭೆಯಲ್ಲಿ ಗೊಂದಲ ಉಂಟಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಕೆಲವು ಆರೋಪಗಳಿಗೆ ಕಾರ್ಯ ನಿರ್ವಹಣಾಧಿಕಾರಿ ಮೇಲೆ ಗೂಬೆ ಕೂರಿಸಲಾಗಿದೆ. ಯಾರ ಮೇಲೂ ಆರೋಪ ಹೊರಿಸಬೇಡಿ, ಈ ಎಲ್ಲಾ ಅವ್ಯವಹಾರಗಳಿಗೆ ನಿರ್ದೇಶಕರು, ಅಧ್ಯಕ್ಷರು ಹೊಣೆಯಾಗಲಿದ್ದೀರಿ ಎಂದು ಸದಸ್ಯರು ದೂರಿದ್ದಾರೆ. ಆದರೆ ಅಧ್ಯಕ್ಷ ಗೀತಾನಂದ ಶೆಟ್ಟಿ ಮಾತ್ರ ಆರೋಪಗಳನ್ನು ಅಲ್ಲಗಳೆದಿದ್ದಾರೆ.
PublicNext
18/09/2024 07:37 am