ಮುಲ್ಕಿ: ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಮತ್ತು ಕಿನ್ನಿಗೋಳಿ ಕೊರಗ ಅಭಿವೃದ್ಧಿ ಸಂಘದ ವತಿಯಿಂದ ಹಕ್ಕುಪತ್ರಕ್ಕಾಗಿ ಮುಲ್ಕಿ ತಾಲೂಕು ತಹಸೀಲ್ದಾರ್ ಕಛೇರಿ ಮುಂಭಾಗ ಬುಧವಾರ ಆರಂಭಗೊಂಡ ಅಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಮುಂದುವರಿದಿದ್ದು, ಮತ್ತಷ್ಟು ದಿನ ಮುಂದುವರಿಯುವ ಸಾಧ್ಯತೆ ಕಂಡುಬಂದಿದೆ.
ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಎಸ್.ರವರು ಸತತ ಎರಡು ಬಾರಿ ಧರಣಿ ನಿರತರ ಜೊತೆ ಸಮಾಲೋಚನೆ ನಡೆಸಿ ಸಮಸ್ಯೆಯ ಪರಿಹಾರದ ಮನವೊಲಿಕೆ ಮಾಡಿದರೂ ಹಕ್ಕುಪತ್ರ ಕೈಗೆ ದೊರಕುವವರೆಗೆ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಧರಣಿ ನಿರತರು ಎಚ್ಚರಿಸಿದ್ದಾರೆ.
ಅರಣ್ಯಮೂಲ ಆದಿವಾಸಿ ಬುಡಕಟ್ಟು ಒಕ್ಕೂಟದ ಸಂಜೀವ ಮೂಡುಬಿದಿರೆ ಮಾತನಾಡಿ, ನಾವು ತಿಳಿಸಿದ ಜಾಗದಲ್ಲಿ ಹಕ್ಕುಪತ್ರ ನೀಡಲೇಬೇಕು. ಸರಕಾರ ಮನಸ್ಸು ಮಾಡಿದರೆ ಇದು ಸಾಧ್ಯವಿದೆ. ಅಲ್ಲಿಯವರೆಗೆ ನಮ್ಮ ಧರಣಿ ಮುಂದುವರಿಯಲಿದೆ. ಹಿಂದೆ ತಾಳಿಪಾಡಿಯಲ್ಲಿ ಗುರುತಿಸಿದ ಜಾಗವನ್ನಾದರೂ ನೀಡಲಿ ಎಂದಿದ್ದಾರೆ. ಸಮುದಾಯದ ರಾಜ್ಯ ಸಂಯೋಜಕ ಕೆ.ಪುತ್ರನ್, ಸುಂದರ ಗುತ್ತಕಾಡು, ಸುಶೀಲ, ದಿವಾಕರ್ ಮತ್ತಿತರರ ನೇತೃತ್ವದಲ್ಲಿ ಧರಣಿ ಮುಂದುವರಿದಿದೆ. ತಹಸೀಲ್ದಾರ್ ಕಛೇರಿ ಮುಂಭಾಗದಲ್ಲಿ ಟೆಂಟ್ ಹಾಕಿ ಅಲ್ಲೇ ಅಡುಗೆ ಮಾಡಿಕೊಂಡು, ಡೋಲು, ತಮಟೆ, ಜನಪದ ಹಾಡು, ಘೋಷಣೆಗಳ ಮೂಲಕ ಧರಣಿ ನಿರತರಾಗಿದ್ದಾರೆ. ಮುಲ್ಕಿ ಪೋಲಿಸರು ಬಂದೋಬಸ್ತ್ ನಡೆಸಿದ್ದಾರೆ.
PublicNext
19/09/2024 07:21 pm