ಹುಬ್ಬಳ್ಳಿ: ಪ್ರತಿಭಾವಂತ ಕ್ರಿಕೆಟ್ ಪಟುಗಳ ಜೀವನದ ಜೊತೆಗೆ ಕೆಎಸ್ಸಿಎ ಚೆಲ್ಲಾಟ ಆಡುತ್ತಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ವಿರುದ್ಧ ಮತ್ತೆ ಪೋಷಕರು ಅಸಮಾಧಾನ ಹೊರಹಾಕಿದ್ದಾರೆ. ಕೆಎಸ್ಸಿಎಯಲ್ಲಿ ಕ್ರಿಕೆಟ್ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ ಎಂಬುವಂತ ಆರೋಪ ಮುನ್ನೆಲೆಗೆ ಬಂದಿದೆ.
ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳಿಗೆ ಪೂರಕ ವೇದಿಕೆ ಕಲ್ಪಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೊಶಿಯೇಶನ್ ತನ್ನ ಶಾಖೆಯನ್ನು ಹುಬ್ಬಳ್ಳಿಯಲ್ಲಿ ಸ್ಥಾಪನೆ ಮಾಡಿದೆ. ಆದರೆ ನಿಯಮನುಸಾರ ಕ್ರಿಕೆಟ್ ಪಟುಗಳ ಆಯ್ಕೆ ಮಾಡದೇ ಬೇಕಾಬಿಟ್ಟಿ ಆಯ್ಕೆ ಮಾಡಿರುವ ಆರೋಪ ಗಂಭೀರವಾಗಿ ಕೇಳಿ ಬಂದಿದೆ. ಕೆಎಸ್ಸಿಎ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ 16 ವರ್ಷ ವಯೋಮಿತಿಯ ಆಯ್ಕೆ ಪ್ರಕ್ರಿಯೆಯಲ್ಲಿ ನಿಯಮದ ಪ್ರಕಾರ ಮೊದಲು ಲೀಗ್ ಪಂದ್ಯ ನಡೆಸಬೇಕಿತ್ತು. ನಂತರ ಕ್ರಿಕೆಟ್ ಕ್ರೀಡಾಪಟುಗಳ ಆಯ್ಕೆ ಮಾಡಬೇಕಿತ್ತು. ಲೀಗ್ ಪಂದ್ಯಗಳನ್ನು ನಡೆಸದೇ ನೇರವಾಗಿ ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿರುವ ಪಾಲಕರು, ಮಳೆಯ ಕಾರಣವೊಡ್ಡಿ ನೇರವಾಗಿ ಆಯ್ಕೆ ನಡೆಸುತ್ತಿರುವುದು ಎಷ್ಟು ಸರಿ ಎಂದು ಕೆಎಸ್ಸಿಎ ಕನ್ವಿನರ್ ನಿಖಿಲ್ ಭೂಸದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಕನ್ವಿನರ್ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆಂದು ಆರೋಪ ಮಾಡುತ್ತಿರೋ ಪಾಲಕರು, ಪ್ರತಿಭಾವಂತ ಕ್ರಿಕೆಟ್ ಪಟುಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐದು ಜಿಲ್ಲೆಗಳನ್ನು ಒಳಗೊಂಡಿರೋ ಧಾರವಾಡ ಕ್ರಿಕೆಟ್ ವಲಯ ಕೆಎಸ್ಸಿಎ, ಈ ಹಿಂದೆಯೂ 19 ಹಾಗೂ 23 ವರ್ಷ ವಯೋಮಿತಿಯ ಕ್ರಿಕೆಟ್ ಪಟುಗಳ ಪಾಲಕರಿಂದ ಗಂಭೀರ ಆರೋಪ ಕೇಳಿ ಬಂದಿತ್ತು. 19 ಹಾಗೂ 23 ವರ್ಷ ವಯೋಮಿತಿಯ ಪಟುಗಳ ಆಯ್ಕೆ ಪ್ರಕ್ರಿಯೆಯಲ್ಲೂ ತಾರತಮ್ಯ ಎಸಗಿದ್ದರು ಎನ್ನಲಾಗುತ್ತಿದೆ. ಆದ್ರೆ ಕ್ರಿಕೆಟ್ ಪಟುಗಳ ಪಾಲಕರ ಆರೋಪ ತಳ್ಳಿ ಹಾಕಿದ ಕನ್ವಿನರ್. ಬಿಸಿಸಿಐ ನಿಯಮದಂತೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ ಎನ್ನುತ್ತಾರೆ.
ಒಟ್ಟಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಒಂದಿಲ್ಲೊಂದು ರೀತಿಯಲ್ಲಿ ಸುದ್ಧಿಯಾಗುತ್ತಲೇ ಇದೆ. ಈ ಬಗ್ಗೆ ಸೂಕ್ತ ತನಿಖೆ ನಡೆದು ಪ್ರತಿಭಾವಂತರಿಗೆ ನ್ಯಾಯ ದೊರಕಿಸಿಕೊಡುವ ಹಾಗೂ ರಾಜಕೀಯ ಪ್ರೇರಿತ ಬೆಳವಣಿಗೆಗೆ ಬ್ರೇಕ್ ಹಾಕುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
09/09/2024 05:13 pm