ನೆಲಮಂಗಲ: ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಚಿತ್ರದ ಶೂಟಿಂಗ್ ಸೆಟ್ ನಲ್ಲಿ 30 ಅಡಿ ಮೇಲಿಂದ ಬಿದ್ದು ಲೈಟ್ ಬಾಯ್ ಮೋಹನ್ ಸಾವನ್ನಪ್ಪಿದ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನಿರ್ದೇಶಕ ಸೇರಿದಂತೆ ಚಿತ್ರ ತಂಡದ ಕೆಲವರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಅಡಕಿಮಾರನಹಳ್ಳಿಯಲ್ಲಿ ನಿರ್ಮಾಪಕ ಇ.ಕೃಷ್ಣಪ್ಪರವರಿಗೆ ಸೇರಿದ ಬೃಹತ್ ಗೋದಾಮಿನಲ್ಲಿ ಕೆಲದಿನಗಳಿಂದ ಮನದ ಕಡಲು ಫಿಲ್ಮ್ ಶೂಟಿಂಗ್ ಸುಗಮವಾಗಿ ಸಾಗಿತ್ತು. ಕಳೆದ ಮಂಗಳವಾರ ಸಂಜೆ 5.10ರ ಸುಮಾರಿಗೆ ಲೈಟ್ ಬಾಯ್ ಮೋಹನ್ ಕುಮಾರ್ 30 ಅಡಿ ಎತ್ತರದ ರೋರು ಮೇಲೆ ಹತ್ತಿ ಲೈಟನ್ನು ಬಿಚ್ಚುತ್ತಿದ್ದ ವೇಳೆ ಏಕಾಏಕಿ ಮೇಲಿಂದ ಕೆಳಕ್ಕೆ ಬಿದ್ದಿದ್ದಾರೆ. ಮೋಹನ್ ತಲೆಗೆ ಏಟಾಗಿ ತೀವ್ರ ರಕ್ತಸ್ರಾವವಾಗುತ್ತಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿತ್ತು
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆಂ.ಗ್ರಾ. ಜಿಲ್ಲಾ ಎಸ್ಪಿ ಸಿ.ಕೆ.ಬಾಬಾ ಮಾತನಾಡಿ, ಚಿತ್ರದ ನಿರ್ಮಾಪಕ ಅಡಕಿಮಾರನಹಳ್ಳಿ ಇ.ಕೃಷ್ಣಪ್ಪ ಮಾಲೀಕತ್ವದ ಬೃಹತ್ ಗೋದಾಮಿನಲ್ಲಿ ಯಾವುದೇ ಪರ್ಮಿಷನ್ ತೆಗೆದುಕೊಳ್ಳದೆ ಅನಧಿಕೃತವಾಗಿ ಫಿಲ್ಮ್ ಶೂಟಿಂಗ್ ಮಾಡಿದ್ದಾರೆ.
ಲೈಟ್ ಬಾಯ್ ಮೋಹನ್ ಗೆ ಸುರಕ್ಷತಾ ಕ್ರಮಗಳನ್ನು ಒದಗಿಸದೆ ನಿರ್ಲಕ್ಷ್ಯ ತೋರಿರುವ ಕಾರಣ ಮನದ ಕಡಲು ಚಿತ್ರ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಅಡಕಿಮಾರನಹಳ್ಳಿ ಇ.ಕೃಷ್ಣಪ್ಪ, ಮ್ಯಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್ ಮೇಲೆ ಕೇಸ್ ದಾಖಲಿಸಿ ತನಿಖೆ ಮಾಡುತ್ತಿರುವುದಾಗಿ ತಿಳಿಸಿದರು.
PublicNext
07/09/2024 10:00 am