ನವದೆಹಲಿ: ಮುಂಬೈ ಮೂಲದ ನಟ-ರೂಪದರ್ಶಿ ಕಾದಂಬರಿ ಜೇಥ್ವಾನಿ ಅವರನ್ನು, ಸರಿಯಾದ ತನಿಖೆ ನಡೆಸದೆ ತಪ್ಪಾಗಿ ಬಂಧಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಡಿಜಿ ಸೇರಿದಂತೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಆಂಧ್ರಪ್ರದೇಶ ಸರ್ಕಾರ ಭಾನುವಾರ ಅಮಾನತುಗೊಳಿಸಿದೆ .
ಮಾಜಿ ಗುಪ್ತಚರ ಮುಖ್ಯಸ್ಥ ಪಿ.ಸೀತಾರಾಮ ಆಂಜನೇಯಲು (ಡಿಜಿ ಶ್ರೇಣಿ), ವಿಜಯವಾಡದ ಮಾಜಿ ಪೊಲೀಸ್ ಆಯುಕ್ತ ಕ್ರಾಂತಿ ರಾಣಾ ಟಾಟಾ (ಇನ್ಸ್ಪೆಕ್ಟರ್ ಜನರಲ್ ಶ್ರೇಣಿ) ಮತ್ತು ಮಾಜಿ ಉಪ ಪೊಲೀಸ್ ಆಯುಕ್ತ ವಿಶಾಲ್ ಗುನ್ನಿ (ಸೂಪರಿಂಟೆಂಡೆಂಟ್ ಶ್ರೇಣಿ) ಅವರನ್ನು ಈ ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ತನಿಖೆಯ ನಂತರ ಅಮಾನತುಗೊಳಿಸಲಾಗಿದೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಚಲನಚಿತ್ರ ನಿರ್ಮಾಪಕ ಕೆವಿಆರ್ ವಿದ್ಯಾಸಾಗರ್ ಅವರೊಂದಿಗೆ ಅಧಿಕಾರಿಗಳು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ ಜೇಥ್ವಾನಿ ಆಗಸ್ಟ್ನಲ್ಲಿ ಪೊಲೀಸ್ ಆಯುಕ್ತ ಎಸ್.ವಿ.ರಾಜಶೇಖರ್ ಬಾಬು ಅವರಿಗೆ ದೂರು ನೀಡಿದ್ದರು.
ಉನ್ನತ ಪೊಲೀಸ್ ಅಧಿಕಾರಿಗಳು ವಿದ್ಯಾಸಾಗರ್ ಅವರೊಂದಿಗೆ ಶಾಮೀಲಾಗಿ ತನಗೆ ಮತ್ತು ತನ್ನ ಪೋಷಕರಿಗೆ ಕಿರುಕುಳ ನೀಡಿದ್ದಾರೆ. ತಮ್ಮನ್ನು ಬಂಧಿಸಿ ಯಾವುದೇ ಮುನ್ಸೂಚನೆಯಿಲ್ಲದೆ ಮುಂಬೈನಿಂದ ವಿಜಯವಾಡಕ್ಕೆ ಕರೆದೊಯ್ಯಲಾಗಿದೆ ಎಂದು ಅವರು ಆರೋಪಿಸಿದ್ದರು.
ಪೊಲೀಸರು ತನ್ನನ್ನು ಮತ್ತು ತನ್ನ ವಯಸ್ಸಾದ ಪೋಷಕರನ್ನು ಅವಮಾನ ಮತ್ತು ಕಾನೂನುಬಾಹಿರ ಬಂಧನಕ್ಕೆ ಒಳಪಡಿಸಿದ್ದಾರೆ. ನಮ್ಮ ಕುಟುಂಬವು 40 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಕಳೆದಿದೆ ಎಂದು ಮುಂಬೈ ಮೂಲದ ಕಾದಂಬರಿ ಜೇಥ್ವಾನಿ ಹೇಳಿದ್ದಾರೆ.
ಜೇಠ್ವಾನಿ ಮತ್ತು ಅವರ ಕುಟುಂಬವನ್ನು ಸಿಲುಕಿಸಲು ವಿದ್ಯಾಸಾಗರ್ ಅವರು ಭೂ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಹಲವಾರು ದಿನಗಳವರೆಗೆ ಜಾಮೀನು ಅರ್ಜಿ ಸಲ್ಲಿಸಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ಜೇತ್ವಾನಿ ಪರ ವಕೀಲ ಎನ್.ಶ್ರೀನಿವಾಸ್ ಆರೋಪಿಸಿದ್ದರು.
ವರದಿಯನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ ಮೇಲ್ನೋಟಕ್ಕೆ ಪುರಾವೆಗಳಿವೆ ಮತ್ತು ಅವರ ಗಂಭೀರ ದುರ್ನಡತೆ ಮತ್ತು ಕರ್ತವ್ಯ ಲೋಪಕ್ಕಾಗಿ ಶಿಸ್ತು ಕ್ರಮಗಳು ಅಗತ್ಯವಾಗಿವೆ ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ.
ಎಫ್ಐಆರ್ ದಾಖಲಾಗುವ ಮೊದಲೇ ಮಹಿಳೆಯನ್ನು ಬಂಧಿಸುವಂತೆ ಆಂಜನೇಯಲು ಇತರ ಇಬ್ಬರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಫೆಬ್ರವರಿ 2ರಂದು ಎಫ್ಐಆರ್ ದಾಖಲಾಗಿದ್ದು, ಜನವರಿ 31 ರಂದು ಆಕೆಯ ಬಂಧನಕ್ಕೆ ಸೂಚನೆಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.
PublicNext
16/09/2024 07:21 am