ಕುಂದಗೋಳ: ನಮ್ಮ ಅಂಗವೈಕಲ್ಯಕ್ಕೆ ವಿವಿಧ ಸಾಧನಗಳು ಸಿಗುತ್ತೆ, ನಮ್ಮ ಕಷ್ಟ ಪರಿಹಾರ ಆಗುತ್ತೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಅಲಿಂಕೋ ಸಂಸ್ಥೆ ಸಹಯೋಗದ ಮೌಲ್ಯಮಾಪನ ತಪಾಸಣಾ ಶಿಬಿರಕ್ಕೆ ಬಂದವರು ಗೋಳಾಡುವ ದುಸ್ಥಿತಿ ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಏರ್ಪಟ್ಟಿತ್ತು.
ಹೌದು ! ವಿವಿಧ ಅಂಗವೈಕಲ್ಯ, ಆರೋಗ್ಯ ಸಮಸ್ಯೆ ಹೊತ್ತು ತಮ್ಮ ಪರಿಸ್ಥಿತಿ ತಿಳಿಸಿ ಪರಿಹಾರ ಪಡೆಯಲು ಬಂದವರು ಒಂದೆಡೆ ಕೂರಲು ಜಾಗವಿಲ್ಲದೆ, ಗಿಜಿ ಗಿಜಿ ಗದ್ದಲದ ನಡುವೆ ಒದ್ದಾಡುತ್ತಿದ್ದರು. ಈ ಮಧ್ಯೆ ಈ ಇಲಾಖೆ ಅಧಿಕಾರಿಗಳು ಕೈ- ಕಾಲು, ವಿವಿಧ ಅಂಗಾಂಗಗಳ ಸಮಸ್ಯೆ ಹೊತ್ತವರಿಗೆ ಸರದಿ ಸಾಲಿನಲ್ಲಿ ಬನ್ನಿ ಎಂದಾಗ ಸಾಲಿನಲ್ಲಿ ನಿಂತವರ ಸ್ಥಿತಿ ಮರುಕ ಪಡುವಂತೆ ಇತ್ತು.
ಇದಕ್ಕೆ ಸಾಕ್ಷಿ ಎಂಬಂತೆ ಈ ದೃಶ್ಯಗಳನ್ನು ಒಮ್ಮೆ ಗಮನಿಸಿ... ಅಂಗಾಂಗ ಸಮಸ್ಯೆ ಇರುವ ವಯೋವೃದ್ಧರು, ನಾಗರಿಕರು, ಮಕ್ಕಳು ಏನು ? ಎಲ್ಲಿ ? ಹೇಗೆ ? ಎಂಬುದನ್ನೇ ತಿಳಿಯದೇ ಕ್ಷಣಕಾಲ ಸ್ತಬ್ಧರಾಗಿದ್ದರು.
ಇನ್ನೂ ಆಸ್ಪತ್ರೆಯ ಮೊದಲ ಮಹಡಿಯಲ್ಲಿ 60 ವರ್ಷ ಮೇಲ್ಪಟ್ಟವರ ಆರೋಗ್ಯ ತಪಾಸಣೆ ನಡೆದಿದ್ದು, ಅಲ್ಲಿ ಹೋಗಲಾರದೆ ಕಾಲಿಲ್ಲದ ವ್ಯಕ್ತಿಯೊಬ್ಬರು ತಮ್ಮ ಸಮಸ್ಯೆ ಹೇಳಿ ಕೈ ಮುಗಿದು ಪರಿಹಾರ ಕೇಳಿದ್ರು.
ಈ ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಅಂಗವಿಕಲತೆ ಮೌಲ್ಯಮಾಪನ ಆರೋಗ್ಯ ಸಮಸ್ಯೆ ತಪಾಸಣೆ ಮಾಡಬೇಕಾದ ಅಧಿಕಾರಿಗೆ ಕನ್ನಡವೇ ಬಾರದೆ ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಹಳ್ಳಿಗರ ಸಮಸ್ಯೆ ಕೇಳುತ್ತಿರುವುದು ವಿಪರ್ಯಾಸ ಎನಿಸಿತು. ಇತ್ತ ಇಲಾಖೆ ಸಹ ಸಿಬ್ಬಂದಿಗೂ ಹಿಂದಿ, ಇಂಗ್ಲಿಷ್ ಭಾಷೆಯ ಅರಿವೇ ಇರಲಿಲ್ಲಾ.
ಒಟ್ಟಾರೆ ಜನರಿಗೆ ಸೂಕ್ತ ಸೌಕರ್ಯ ಹಾಗೂ ಶಿಸ್ತು ಇರದೆ ದಿಢೀರ್ ವಿಕಲಚೇತನರ ಮೌಲ್ಯಮಾಪನ ಶಿಬಿರ ಜಂಜಾಟವನ್ನೇ ಸೃಷ್ಟಿಸಿತು.
Kshetra Samachara
18/07/2024 05:28 pm