ಹುಬ್ಬಳ್ಳಿ: ಕಳೆದ ಹಲವು ದಿನಗಳಿಂದ ಡ್ರಗ್ಸ್ ಹಾಗೂ ಹದಗೆಟ್ಟ ಕಾನೂನು ವ್ಯವಸ್ಥೆಯಿಂದಾಗಿ ಸುದ್ದಿಯಾಗಿದ್ದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ಇದೀಗ ಕಳೆದ ಎರಡು ತಿಂಗಳಿನಿಂದ ಮತ್ತೇ ಸುದ್ದಿಯಲ್ಲಿದೆ. ಆದ್ರೆ ಸುದ್ದಿ ಮಾತ್ರ ಭಿನ್ನವಾಗಿದೆ.
ಹೀಗಾಗಿ ಖುದ್ದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನವನಗರದಲ್ಲಿನ ಕಮಿಷನರ್ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು. ಹಾಗಾದ್ರೆ ಸಭೆಯಲ್ಲಿ ನಡೆದ ವಿಷಯಗಳು ಏನೇನು? ಅಧಿಕಾರಿಗಳಿಗೆ ಲಾಡ್ ಏನು ಹೇಳಿದ್ರು ಎಂಬುದನ್ನು ತೋರಿಸ್ತೀವಿ ನೋಡಿ.
ಅಂಜಲಿ ಹಾಗೂ ನೇಹಾ ಹೆಸರು ಕೇಳಿದ್ರೆ ಸಾಕು ಪಟ್ಟನೆ ನೆನಪಾಗೋದು ಹುಬ್ಬಳ್ಳಿ. ಈ ಇಬ್ಬರು ಯುವತಿಯರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಇದು ವಿರೋಧ ಪಕ್ಷದ ಅಸ್ತ್ರವಾಗಿ ಪರಿಣಮಿಸಿ ಹುಬ್ಬಳ್ಳಿಗೆ ಘಟಾನುಘಟಿ ನಾಯಕರು ಭೇಟಿ ನೀಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಯ ಸುರಿಮಳೆ ಗೈದಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಅವಳಿ ನಗರದಲ್ಲಿ ಡ್ರಗ್ಸ್ ಎಂಬ ಮಹಾಮಾರಿ ವಕ್ಕರಿಸಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಎಂದು ಸಾರಿ ಸಾರಿ ಹೇಳಿದ್ದರು.
ಹೀಗಾಗಿ ರಾಜ್ಯ ಸರ್ಕಾರ ಈ ಡ್ಯಾಮೇಜ್ ಕಂಟ್ರೋಲ್ ಮಾಡುವ ಸಲುವಾಗಿ ಮೂವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಕಮಿಷನರ್ ಅವರನ್ನು ವರ್ಗಾವಣೆ ಮಾಡಿ, ಅವಳಿ ನಗರಕ್ಕೆ ಖಡಕ್ ಅಧಿಕಾರಿ ಶಶಿಕುಮಾರ್ ಅವರನ್ನು ನೇಮಕ ಮಾಡಿತು.
ಇನ್ನು ಅಧಿಕಾರ ವಹಿಸಿಕೊಂಡ ಎರಡೇ ತಿಂಗಳಲ್ಲಿ ಶಶಿಕುಮಾರ್ ಅವಳಿ ನಗರದಲ್ಲಿ ಸಾಕಷ್ಟು ಬದಲಾವಣೆ ತಂದ್ರು. ಮುಖ್ಯವಾಗಿ ಡ್ರಗ್ಸ್ ವಿರುದ್ದ ಸಮರ ಸಾರಿ 1000 ಹೆಚ್ಚು ಡ್ರಗ್ಸ್ ಕುಳಗಳಿಗೆ ಬಿಸಿ ಮುಟ್ಟಿಸಿದರು. ಇದರ ನಡುವೆ ಮೀಟರ್ ಬಡ್ಡಿ ಕುಳಗಳನ್ನು ಜೈಲಿಗೆ ಅಟ್ಟಿದರು. ಅಷ್ಟೇ ಅಲ್ಲದೇ ರೌಡಿ ಶೀಟರ್ ಗಳ ಪರೇಡ್ ನಡೆಸಿ ಕಾನೂನು ಸುವ್ಯವಸ್ಥೆ ಹದಗೆಡಿಸಿದರೆ ಹುಷಾರ್ ಎಂದು ವಾರ್ನಿಂಗ್ ಕೊಟ್ಟರು.ಅಷ್ಟೇ ಅಲ್ಲದೇ ಅವಳಿ ನಗರದ ಪ್ರತಿಯೊಂದು ಏರಿಯಾಗೆ ತೆರಳಿ ಸಾರ್ವಜನಿಕರ ಸಮಸ್ಯೆ ಆಲಿಸಿ ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರಿಗೆ ನಂಬಿಕೆ ಬರುವ ಕೆಲಸವನ್ನು ಮಾಡಿದ ಹಿನ್ನೆಲೆಯಲ್ಲಿ ಇಂದು ಸಂತೋಷ್ ಲಾಡ್ ಸಭೆಯನ್ನು ನಡೆಸಿ ಕಮಿಷನರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಕಳೆದ ಕೆಲವು ದಿನಗಳಿಂದ ಹಾಳಾಗಿದ್ದ ಹುಬ್ಬಳ್ಳಿ ಮತ್ತೇ ಇದೀಗ ಹೂಬಳ್ಳಿ ಯಾಗುವ ಲಕ್ಷಣಗಳು ಗೋಚರವಾಗಿದ್ದು, ಇದು ಹೀಗೆಯೆ ಮುಂದುವರೆಯಲಿ ಎಂದು ಸಂತೋಷ್ ಲಾಡ್ ಸೇರಿದಂತೆ ಅವಳಿ ನಗರದ ಸಾರ್ವಜನಿಕರ ಒತ್ತಾಸೆಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/09/2024 11:23 am