ಹುಬ್ಬಳ್ಳಿ: ರೈತರಿಗೆ ಕಳಪೆ ಗುಣಮಟ್ಟದ ಬೀಜ ವಿತರಣೆ ಮಾಡಿದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಕೃಷಿ ಇಲಾಖೆಯ ಅಧಿಕಾರಿಗಳು ರೈತನ ಜಮೀನಿಗೆ ಭೇಟಿ ನೀಡಿದ್ದಾರೆ ಹಾಗೂ ಬೀಜ ವಿತರಣೆ ಮಾಡಿದ ಸಿದ್ದಾರೂಢ ಆಗ್ರೋಗೆ ಕೃಷಿ ಇಲಾಖೆಯ ಅಧಿಕಾರಿಗಳು ಬೀಜ ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂದು ನೋಟಿಸ್ ನೀಡಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ರೈತ ಹನುಮಂತ ಕರಿಗಾರ ನೀಲಿಜನ್ ರಸ್ತೆಯಲ್ಲಿರುವ ಸಿದ್ದಾರೂಢ ಅಗ್ರೋದಲ್ಲಿ ನಿರ್ಮಲಾ ಕಂಪನಿಯ ಹೆಸರು ಬೀಜಗಳನ್ನು ಖರೀದಿ ಮಾಡಿ ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿದ ಹೆಸರಿನ ಗಿಡಗಳು ಸೊಗಸಾಗಿ ಬೆಳೆದವು. ಆದ್ರೆ ಗಿಡದಲ್ಲಿ ಕಾಯಿಗಳು ಮಾತ್ರ ಏರುಪೇರಾಗಿದ್ದವು. ಹೀಗಾಗಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಮುಂದೆ ತಮ್ಮ ಕಷ್ಟವನ್ನು ಹೇಳಿಕೊಂಡ ಹಿನ್ನೆಲೆ ವರದಿ ಪ್ರಸಾರ ಮಾಡಲಾಗಿತ್ತು.
ಇನ್ನು ವರದಿ ಪ್ರಸಾರವಾದ ಹಿನ್ನೆಲೆ ಎಚ್ಚೆತ್ತ ಕೃಷಿ ಇಲಾಖೆಯ ಅಧಿಕಾರಿಗಳು ರೈತನ ಹೊಲಕ್ಕೆ ಭೇಟಿ ನೀಡಿ ಬೆಳೆಯನ್ನು ಧಾರವಾಡದ ಅಗ್ರಿ ಯೂನಿವರ್ಸಿಟಿ ಗೆ ಕಳುಹಿಸಿಕೊಟ್ಟಾಗ ಬೇರೆ ತಳಿಯ ಮಿಶ್ರಿತ ಪ್ರಜಾತಿಯ ಬೀಜದ ಮಿಶ್ರಣದಿಂದ ಈ ರೀತಿಯಾಗಿದೆ ಎಂದು ಕೃಷಿ ವಿಜ್ಞಾನಿಗಳು ವರದಿ ಕೊಟ್ಟಿದ್ದಾರೆ. ಬಳಿಕ ಕೃಷಿ ಇಲಾಖೆಯ ಅಧಿಕಾರಿಗಳು ಬೀಜ ಮಾರಾಟ ಮಾಡಿದ್ದ ಸಿದ್ದಾರೂಢ ಅಗ್ರೋ ಕೇಂದ್ರಕ್ಕೆ ನೋಟಿಸ್ ನೀಡಿದೆ. ಅಷ್ಟೇ ಅಲ್ಲದೇ ಕಳಪೆ ಬೀಜ ಪೂರೈಸಿದ ನಿರ್ಮಲಾ ಕಂಪನಿ ಹಾಗೂ ಬೀಜ ಮಾರಾಟ ಮಾಡಿದ ಸಿದ್ದಾರೂಢ ಅಗ್ರೋ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ರೈತ ಹನುಮಂತ ಕರಿಗಾರ ಆಗ್ರಹಿಸಿದ್ದು ಹೀಗೆ.
ಮೊದಲೇ ಸಾಲ ಮಾಡಿ ಬೆಳೆದ ಬೆಳೆ ಕೈ ಹಿಡಿಯುತ್ತೆ ಎಂದು ಕನಸನ್ನು ಕಂಡ ರೈತನಿಗೆ ನಿರ್ಮಲವಲ್ಲದ ನಿರ್ಮಲ ಬೀಜದ ಕಂಪನಿಯಿಂದ ಮೋಸ ಆಗಿದೆ ಅಂತಾ ಇದೀಗ ತಿಳಿದು ಬಂದಿದ್ದು. ಕೃಷಿ ಸಚಿವರು ಇತ್ತ ಗಮನ ಹರಿಸಿ ರೈತರ ಬದುಕಿನ ಜೊತೆ ಆಟ ಆಡುವ ಇಂತಹ ಬೀಜದ ಕಂಪನಿ ಹಾಗೂ ಅಗ್ರೋಗಳ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/09/2024 01:36 pm