ಮಂಗಳೂರು: ಹಕ್ಕುಪತ್ರ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಸಹಿತ ನಾನಾ ಸೌಲಭ್ಯ ವಿತರಣೆ
ಮಂಗಳೂರು: ಕಾವೂರು, ಕುಂಜತ್ತಬೈಲ್, ಪಂಜಿಮೊಗರು ಗ್ರಾಮದ ಫಲಾನುಭವಿಗಳಿಗೆ ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಮಂಗಳೂರು ನಗರ ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಮಂಗಳವಾರ ವಿತರಿಸಿದರು. ಕಾವೂರು ಸೊಸೈಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 38 ಜನರಿಗೆ ಹಕ್ಕುಪತ್ರ, 28 ಜನರಿಗೆ ಸಂಧ್ಯಾ ಸುರಕ್ಷಾ, 22 ವಿಧವಾ ವೇತನ ಹಾಗೂ 6 ವೃದ್ಧಾಪ್ಯ ವೇತನ ಮತ್ತು 4 ವಿಶೇಷಚೇತನ ವೇತನವನ್ನು ಶಾಸಕರು ವಿತರಿಸಿದರು.
ಶಾಸಕ ಡಾ. ವೈ. ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಮನಪಾ ಸದಸ್ಯರಾದ ಸುಮಂಗಲಾ ರಾವ್, ಗಾಯತ್ರಿ ರಾವ್, ಜಿಲ್ಲಾ ಮಾಧ್ಯಮ ಪ್ರಮುಖ್ ರಣದೀಪ್ ಕಾಂಚನ್, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶೀತೇಶ್ ಕೊಂಡೆ, ಕಂದಾಯ ಅಧಿಕಾರಿ ನವೀನ್ ಹಾಗೂ ಫಲಾನುಭವಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.