ಮಂಡ್ಯ : ಮೀನಿಗೆ ಬಲೆ ಹಾಕಲೆಂದು ಕೆರೆಗೆ ಇಳಿದ ಮೀನುಗಾರನೊಬ್ಬ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಹೊರವಲಯದ ಮಾರೇಹಳ್ಳಿ ಕೆರೆಯಲ್ಲಿ ಜರುಗಿದೆ.
ಪಟ್ಟಣದ ಗಂಗಾಮತ ಬಡಾವಣೆ ನಿವಾಸಿ ನಾಗರಾಜು(55) ಮೃತಪಟ್ಟ ದುರ್ದೈವಿಯಾಗಿದ್ದು, ಶನಿವಾರ ತಡರಾತ್ರಿ 10 ಗಂಟೆ ಸಮಯದಲ್ಲಿ ಈ ಘಟನೆ ಜರುಗಿದೆ.
ರಾತ್ರಿವೇಳೆ ಕೆರೆಗೆ ಬಲೆ ಬಿಟ್ಟು ಬೆಳಗಿನ ಜಾವ ಬಲೆಗೆ ಬಿದ್ದ ಮೀನುಗಳನ್ನು ಹಿಡಿದುಕೊಳ್ಳುವುದು ವಾಡಿಕೆ, ಅದರಂತೆ ಶನಿವಾರ ರಾತ್ರಿ 10 ಗಂಟೆ ಸಮಯದಲ್ಲಿ ಬಲೆ ಬಿಡಲೆಂದು ನಾಗರಾಜು ಹಾಗೂ ಶಿವಣ್ಣ
ಬೋಟ್ನಲ್ಲಿ ಕೆರೆಗೆ ಇಳಿದಿದ್ದು ಬೋಟ್ನಲ್ಲಿ ನಿಂತು ಬಲೆ ಬಿಡುವ ವೇಳೆ ಬೋಟ್ ಮಗುಚಿ ಕೊಂಡಿದೆ.
ಈ ವೇಳೆ ಇಬ್ಬರು ನೀರಿನಲ್ಲಿ ಮುಳುಗಿದ್ದು, ಶಿವಣ್ಣ ಪ್ರಯಾಸ ಪಟ್ಟು ಈಜಿ ದಡ ಸೇರಿದ್ದು, ನಾಗರಾಜು ಈಜಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಭಾನುವಾರ ಬೆಳಿಗ್ಗೆ 12 ಗಂಟೆ ಸಮಯದಲ್ಲಿ ಮೃತನ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
19/01/2025 07:34 pm