ಚಾಮರಾಜನಗರ : ಇತ್ತೀಚೆಗೆ ಬೆಂಗಳೂರಿನಲ್ಲಿ ತಪ್ಪಿಸಿಕೊಂಡಿದ್ದ ಇಬ್ಬರು ಮಕ್ಕಳು ಮಹದೇಶ್ವರಬೆಟ್ಟಕ್ಕೆ ಮಾದಪ್ಪನ ದರ್ಶನಕ್ಕೆಂದು ಆಗಮಿಸಿದ್ದ ಪೋಷಕರೆದುರು ಪ್ರತ್ಯಕ್ಷರಾಗಿರುವ ಅಪರೂಪದ ಘಟನೆ ಮಹದೇಶ್ವರಬೆಟ್ಟದಲ್ಲಿ ನಡೆದಿದೆ.
ಇತ್ತೀಚೆಗೆ ಬೆಂಗಳೂರಿನ ತಿಲಕ ನಗರ ಠಾಣಾ ವ್ಯಾಪ್ತಿಯ ಜಯನಗರದ ಮೂರನೇ ಹಂತದ ನಕಲು ಬಂಡೆ ನಿವಾಸಿಗಳಾದ ವಿದ್ಯಾಶ್ರೀ ಹಾಗೂ ಮಹೇಶ್ ದಂಪತಿ ಪುತ್ರ ಪ್ರವೀಣ್ ಹಾಗು ಆತನ ಸ್ನೇಹಿತ ರವಿ ಕಳೆದ ಐದು ದಿನಗಳಿಂದ ಕಾಣೆಯಾಗಿದ್ದರು. ಇದರಿಂದ ಆತಂಕಗೊಂಡ ಪ್ರವೀಣ್ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿ,ಬಾಲಕರಿಗಾಗಿ ಎಲ್ಲ ಕಡೆ ಹುಡುಕಾಟ ನಡೆಸಿದ್ದರು. ಎಲ್ಲಿಯೂ ಪತ್ತೆಯಾಗದಿದ್ದಾಗ ಕೊನೆಗೆ ಮನೆದೇವರು ಮಹದೇಶ್ವರಬೆಟ್ಟಕ್ಕೆ ಆಗಮಿಸಿ ಮಾದಪ್ಪನ ಮೊರೆ ಹೋಗಿದ್ದರು. ನೀನು ಸತ್ಯ ವಾಗಿದ್ದರೆ ನಮ್ಮ ಮಕ್ಕಳ ಸಿಗಲಿ, ಇಲ್ಲದಿದ್ದರೆ ನೀನು ಕಲ್ಲು ಅಂತ ತಿಳಿದುಕೊಳ್ಳುತ್ತೇವೆ ಎಂದು ಮಾದಪ್ಪನ ಸನ್ನಧಿಯಲ್ಲಿ ಗೋಳಿಟ್ಟಿದ್ದರು.
ಕಳೆದ ಶನಿವಾರ ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಬಾಲಕರು ಸುತ್ತಾಡಿಕೊಂಡು ಮಹದೇಶ್ವರಬೆಟ್ಟಕ್ಕೆ ಬಂದಿದ್ದರು. ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಅರ್ಚಕರೊಬ್ಬರು ಈ ಬಾಲಕರಿಗೆ ಆಶ್ರಯ ನೀಡಿದ್ದರು. ಗುರುವಾರ ಬೆಳಗ್ಗೆ ಸುತ್ತಾಡಿ ಕೊಂಡು ದೇವಸ್ಥಾನದ ಬಳಿ ಬರುತ್ತಿದ್ದಂತೆ
ಪವಾಡ ಎನ್ನುವಂತೆ ಪೋಷಕರು ಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಉರುಳು ಸೇವೆ ಮಾಡುವಾಗ ಎದುರಾಗಿದ್ದಾರೆ.
ಮಕ್ಕಳನ್ನು ಕಳೆದುಕೊಂಡು ಕಂಗಾಲಾಗಿದ್ದ ಪೋಷಕರು ಮಕ್ಕಳನ್ನು ಕಂಡ ಕೂಡಲೇ ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಈ ಸಂಬಂಧ ಮಹದೇಶ್ವರಬೆಟ್ಟ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
PublicNext
24/01/2025 10:38 am