ವಿಜಯಪುರ : ಕಾಲುವೆಯಲ್ಲಿ ತಾಯಿ ತನ್ನ ನಾಲ್ಕು ಮಕ್ಕಳನ್ನು ಎಸೆದು ತಾನೂ ಕೂಡಾ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಜನೆವರಿ 13 ರಂದು ಆಲಮಟ್ಟಿ ಎಡದಂಡೆ ಕಾಲುವೆಯ ಬೇನಾಳ ಗ್ರಾಮದ ಬಳಿ ತಾಯಿ ತನ್ನ ನಾಲ್ಕು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಸ್ಥಳೀಯರು ಭಾಗ್ಯಶ್ರೀಯನ್ನ ರಕ್ಷಣೆ ಮಾಡಿದ್ದರು ಆದರೆ ನಾಲ್ಕು ಕಂದಮ್ಮಗಳು ನೀರು ಪಾಲಾಗಿದ್ದವು.
ಮೊದಲಿಗೆ ತಾಯಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಭಾಗ್ಯಶ್ರೀ ಭಜಂತ್ರಿ, ತನ್ನ ಗಂಡ ಸಾಲಮಾಡಿದ್ದ, ಅದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದೇವು ಎಂದಿದ್ದಳು. ತದನಂತರ ಕ್ಯಾನಲ್ನಲ್ಲಿ ಬೀಸಾಕಿದ್ದು ಗಂಡನೇ ಎಂದು ತಮ್ಮ ಸಂಬಂಧಿ ಮುಂದೆ ಹೇಳಿಕೆ ನೀಡಿದ್ದಳು. ಇದು ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಆದರೆ ಇದೀಗ ಸ್ವತಃ ತಾಯಿ ಭಾಗ್ಯಶ್ರೀ ಭಜಂತ್ರೀ ವಿರುದ್ಧ ನಿಡಗುಂದಿ ಠಾಣೆಯಲ್ಲಿ ದೂರು ದಾಖಲಾಗಿದೆ...
ಸದ್ಯ ಪ್ರತ್ಯಕ್ಷದರ್ಶಿ ಫಾರೆಸ್ಟ್ ಗಾರ್ಡ್ ನಾಗೇಶ ನೀಡಿದ ದೂರಿನ ಅನ್ವಯ ಸೆಕ್ಷನ್ 302 ಅಡಿಯಲ್ಲಿ ತಾಯಿ ಭಾಗ್ಯಶ್ರೀ ವಿರುದ್ಧ ನಿಡಗುಂದಿ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಇತ್ತ ಪೋಲಿಸರು ವಶಕ್ಕೆ ಪಡೆಯುತ್ತಾರೆ ಎಂಬ ಕಾರಣಕ್ಕೆ ಭಾಗ್ಯಶ್ರೀ ಮೂರ್ಚೆ ಹೋದಂತೆ ನಾಟಕವಾಡಿದ್ದಾಳೆ. ಭಾಗ್ಯಶ್ರೀ ಪೋಷಕರು ಆಕೆಯನ್ನು ತವರು ಮನೆ ಲಿಂಗಸೂರಿಗೆ ಕರೆದುಕೊಂಡು ಹೋಗಿದ್ದು, ಪೊಲೀಸರ ಮೇಲೆಯೇ ಭಾಗ್ಯಶ್ರೀ ಸಹೋದರರು ಆರೋಪಿಸಿದ್ದಾರೆ.
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಯಂತೆ ತಂದೆ ಮಾಡಿದ ಸಾಲಕ್ಕೆ ನಾಲ್ಕು ಪುಟ್ಟ ಕಂದಮ್ಮಗಳು ಬಲಿಯಾಗಿವೆ. ಈ ನಾಲ್ಕು ಮಕ್ಕಳ ಸಾವಿಗೆ ಕಾರಣ ತಾಯಿಯೇ ಎಂದು ದೂರು ದಾಖಲಾಗಿದ್ದು ಮುಂಬರುವ ದಿನಗಳಲ್ಲಿ ಈ ಪ್ರಕರಣದ ತನಿಖೆ ಹೇಗೆ ನಡೆಯುತ್ತದೆ ಎಂಬುದನ್ನ ಕಾದು ನೋಡಬೇಕಾಗಿದೆ.
-ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ ವಿಜಯಪುರ
PublicNext
17/01/2025 01:26 pm