ಬೆಳಗಾವಿ: ರಾಜ್ಯದಲ್ಲಿ ಚರ್ಮಕಾರ ಉಪಜಾತಿಗಳನ್ನು ಮಾದಿಗ ಸಂಬಂಧಿತ ಪಟ್ಟಿಯಿಂದ ಬೇರ್ಪಡಿಸಿ ಶೇ. 3 ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾದ ರಾಜ್ಯಾಧ್ಯಕ್ಷ ಭೀಮರಾವ್ ಪವಾರ ಒತ್ತಾಯಿಸಿದರು .
ಕನ್ನಡ ಸಾಹಿತ್ಯ ಭವನದಲ್ಲಿ ಮಾದ್ಯಮಗೋಷ್ಠಿ ನಡೆಸಿ ಮಾತನಾಡಿದ ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ಮುಖಂಡರು, ಚರ್ಮಕಾರ ಉಪ ಜಾತಿಗಳಾದ ಸಮಗಾರ, ಮಚಿಗಾರ, ಡೋಹರ, ಮೋಚಿ, ಚಾಂದಾರ, ಚಮಾಡಿಯಾ, ಘೋರ, ಮೋಚಿಗಾರ, ಮೋಚಿ, ಮುಚ್ಚಿಗ, ತೆಲುಗು ಮೋಚಿ, ಕಾಮಾಟಿ ಮೋಟಿ, ರೋಹಿದಾಸ್ ಸಮಾಜ, ಕಕ್ಕಯ್ಯ, ಕೆಂಕಯ್ಯ, ಚಮಗಾರ್, ಸಮಗಾರ್, ಚಮಾರ್ ಮತ್ತಿತರ 18 ಚರ್ಮಕಾರ ಜಾತಿಗಳು ಹಿಂದುಳಿದಿದೆ. ಚರ್ಮಕಾರ ಸಮುದಾಯಗಳನ್ನು ಮಾದಿಗೆ ಸಂಬಂಧಿತ ಪಟ್ಟಿಯಿಂದ ಬೇರ್ಪಡಿಸಿ ಶೈಕ್ಷಣಿಕವಾಗಿ, ಉದ್ಯೋಗದಲ್ಲಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅತೀ ಹಿಂದುಳಿದಿರುವ ಚರ್ಮಕಾರರ ಸಮುದಾಯಗಳ ಪ್ರಗತಿಗಾಗಿ ಪ್ರತ್ಯೇಕ ಮೀಸಲಾತಿ ನೀಡಬೇಕು.
ಚರ್ಮಕಾರರು ಮತ್ತು ಸಂಬಂಧಿತ ಮೂಲ ಚರ್ಮೋದ್ಯೋಗ ಮಾಡುವ ಅಪಾರ ಜನಸಂಖ್ಯೆಯ ಜನ ಈಗಲೂ ಬೀದಿ ಬದಿಯಲ್ಲಿ ಚಿಕ್ಕ ಚಿಕ್ಕ ಗೂಡಂಗಡಿಗಳನ್ನು ಇಟ್ಟುಕೊಂಡು ಅಥವಾ ಯಾವುದೇ ನೆರಳು, ಸೂರು ಇಲ್ಲದೆ ಕಡು ಬಿಸಿಲಿನಲ್ಲಿ ಪಾದರಕ್ಷೆ ರಿಪೇರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಎಷ್ಟೋ ಜನ ಉದ್ಯೋಗವೇ ಇಲ್ಲದೇ ಕಡು ಬಡತನದಲ್ಲಿ ಇದ್ದಾರೆ. ಈ ಜನರ ಸಮಗ್ರ ಏಳಿಗೆಗಾಗಿ ಒಂದು ಪ್ರತ್ಯೇಕ ಅಭಿವೃದ್ಧಿ ನಿಗಮ/ ಮಂಡಳಿಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ರಾಜ್ಯ ಸರ್ಕಾರವು ಚರ್ಮಕಾರರಿಗೆ ಅವರ ಜನಸಂಖ್ಯೆಯ ಅನುಸಾರ ಒಳಮೀಸಲಾತಿ, ಪ್ರತ್ಯೇಕ ನಿಗಮ ಸಹಿತ ಎಲ್ಲ ಸವಲತ್ತುಗಳನ್ನು ನೀಡಬೇಕೆಂದು ಒತ್ತಾಯಿಸಿದರು.
PublicNext
21/10/2024 06:30 pm